ಪಾಂಡವಪುರ: ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಮನೆಯ ಮುಂದಿನ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಹರೀಶ್ ಮತ್ತು ಸುಷ್ಮಾ ದಂಪತಿಯ ಎರಡು ವರ್ಷದ ಪುತ್ರ ವಿನು ಮೃತಪಟ್ಟ ದುರ್ದೈವಿ ಬಾಲಕ. ಬಾಲಕ ವಿನು ಎಂದಿನಂತೆ ಮನೆಯ ಮುಂದೆ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದಿದ್ದಾನೆ. ಸಂಪ್ ನ ಮುಚ್ಚಳ ಸರಿಯಾಗಿ ಮುಚ್ಚದ ಕಾರಣ ಅಥವಾ ಮಗು ಆಟದ ರಭಸದಲ್ಲಿ ಅಲ್ಲಿಗೆ ಹೋದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಗು ಕಾಣಿಸದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಸಂಪ್ ನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಹೊರತೆಗೆಯಲಾಯಿತಾದರೂ, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.
ಕಣ್ಣೆದುರೇ ಆಟವಾಡಿಕೊಂಡಿದ್ದ ಕಂದಮ್ಮ ಇನ್ನಿಲ್ಲವಾಗಿರುವುದನ್ನು ಕಂಡು ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









