ಬೆಂಗಳೂರು: ಏ.14: 21ನೇ ಶತಮಾನದಲ್ಲೂ ಜಾತಿ ಕ್ರೌರ್ಯ, ಮೇಲು- ಕೀಳು, ಭೇದ- ಭಾವ ಹಾಸು ಹೊಕ್ಕಾಗಿರುವುದು ಈ ದೇಶದ ದುರ್ಗತಿ. ಅಂಬೇಡ್ಕರ್ರವರ ಆಶಯದಂತೆ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆ ನೆಲೆಸಬೇಕು. ಜಾತಿ ವಿನಾಶದ ಕುರಿತು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು ಎಂದು ಖ್ಯಾತ ಸಾಹಿತಿಗಳು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ರವರ 135 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ ಮಹಾನ್ ಮಾನವತಾವಾದಿ ಅಂಬೇಡ್ಕರ್ರವರು ಜಾತಿ ಸಂಕೋಲೆಯನ್ನು ತೊಡೆದು ಹಾಕಿ ಜಾತಿ ವಿನಾಶಗೊಳಿಸುವ ಗುರಿ ತೋರಿದರು. ಆದರೆ ಮರ್ಯಾದೆ ಹತ್ಯೆ, ಜಾತಿ ಶೋಷಣೆ ಸೇರಿದಂತೆ ಜಾತಿ ಕ್ರೌರ್ಯ ಇನ್ನೂ ಅಸ್ತಿತ್ವದಲ್ಲಿದೆ. ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕೂತಿದೆ. ಪ್ರಜಾಪ್ರಭುತ್ವ ಶಿಥಿಲವಾಗಿದೆ. ದೇಶದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ. ಸಾಮಾಜಿಕ, ಆರ್ಥಿಕ ಗುರಿ ಸಾಧನೆಗೆ ಸಂವಿಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಖ್ಯಾತ ಸಾಂಸ್ಕೃತಿಕ ಚಿಂತಕರು ಡಾ. ಬಂಜಗೆರೆ ಜಯಪ್ರಕಾಶ್ ಮುಖ್ಯ ಭಾಷಣಕಾರರಾಗಿ ಮಾತನಾಡಿದಾ ಅವರು ಸಮಾನತೆಯ ತಳಹದಿಯಲ್ಲಿ ನವಭಾರತವನ್ನು ನಿರ್ಮಿಸಿದ
ಯುಗ ನಿರ್ಮಾತೃ ಡಾ. ಬಿ. ಆರ್. ಅಂಬೇಡ್ಕರ್ರವರು ಸಂವಿಧಾನದ ಮೂಲಕ ದೇಶಕ್ಕೆ ಹೊಸ ಚೇತನ ನೀಡಿದರು. ಈ ದೇಶದ ಅವಕಾಶ ವಂಚಿತರು, ಶೋಷಿತರು, ಮಹಿಳೆಯರು, ಹಿಂದುಳಿದವರಿಗೆ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸ್ಥಾನಮಾನ ನೀಡಿದರು. ಆದರೆ ದೇಶದಲ್ಲಿ ಸಂವಿಧಾನದ ವಿರುದ್ದವಾಗಿ ಸನಾತನವಾದ, ಮನುವಾದವನ್ನು ಹೇರುವ ಪ್ರಯತ್ನಗಳಾಗುತ್ತಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಜಯಕರ ಎಸ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ರವರು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯ ಚಿಲುಮೆಯಾದರು. ಬಾಬಾಸಾಹೇಬರ ತತ್ವ,ಚಿಂತನೆ,ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿತ್ತಾಧಿಕಾರಿಗಳು ಡಾ.ಸುನೀತಾ ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವಿಶೇಷಾಧಿಕಾರಿಗಳು ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರು ಪ್ರೊ.ಪಿ.ಸಿ.ನಾಗೇಶ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರು ಪ್ರೊ.ಸಿ.ಸೋಮಶೇಖರ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.














