ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಕುಮಾರರಾಮನ ವ್ಯಕ್ತಿತ್ವ ರೋಮಾಂಚನವಾದುದು. ಕನ್ನಡಕ್ಕೊಬ್ಬ ಗಂಡುಗಲಿಯಿದ್ದರೆ ಅದು ಕುಮಾರರಾಮನೆ ಎಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಕೆ.ದುರುಗಪ್ಪ ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕøತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎಂ. ಹಾಲ್ನಲ್ಲಿ ಭಾನುವಾರ ನಡೆದ 52 ನೇ ಉಪನ್ಯಾಸದಲ್ಲಿ ಕರ್ನಾಟಕದಲ್ಲಿ ಕುಮಾರರಾಮನ ಪಂಥ : ಚಾರಿತ್ರಿಕ ವಿಶ್ಲೇಷಣೆ ವಿಷಯ ಕುರಿತು ಮಾತನಾಡಿದರು.
ಶರಣಾಗತಿ, ಕಪ್ಪಕಾಣಿಕೆ ಕೊಡುವುದನ್ನು ದಿಟ್ಟವಾಗಿ ವಿರೋಧಿಸುತ್ತಿದ್ದ ಕುಮಾರರಾಮ ಹೆಣ್ಣಿನೊಡನೆ ಹೋರಾಡುವುದೆಂದರೆ ಗಂಡು ಕುಲಕ್ಕೆ ಕಳಂಕ ಎನ್ನುವ ಸಂದೇಶ ನೀಡಿದ್ದ. ವೀರನಾಗಿ ಹೋರಾಡಿ ರಣರಂಗದಲ್ಲಿ ಸಾಯಬೇಕೆನ್ನುವ ಕೆಚ್ಚೆದೆಯುಳ್ಳ ಕುಮಾರರಾಮ ಹೆಣ್ಣಿನ ಮೋಹವನ್ನು ದೂರತಳ್ಳಿ ಹುಟ್ಟು-ಸಾವು ಎರಡಲ್ಲೂ ಸಾರ್ಥಕವಾಗಿ ಬದುಕಿ ದೈವತ್ವಕ್ಕೇರಿದ ಅಪರೂಪದ ಧೀರ ಎಂದು ಬಣ್ಣಿಸಿದರು.
ಕುಮಾರರಾಮ ಪಠ್ಯಪುಸ್ತಕದಲ್ಲಿ ಮೆರೆಯದಿದ್ದರೇನಂತೆ. ಜನಪದರ ನಾಲಿಗೆ ಮೇಲೆ ಕುಣಿದಾಡುತ್ತಿದ್ದಾನೆ. ದೆಹಲಿಯವರೆಗೂ ಹೆಸರು ಮಾಡಿದ ಇತಿಹಾಸವಿದೆ. ಅಂತಹ ಪೂರ್ವಜರನ್ನು ನೆನಪಿಸಿಕೊಳ್ಳಬೇಕು. ಇತಿಹಾಸದಲ್ಲಿ ಪ್ರಸಿದ್ದಿ ಪಡೆದುಕೊಳ್ಳಬೇಕಾಗಿದ್ದ ವ್ಯಕ್ತಿತ್ವ ಆತನದು. ಬದುಕು, ವ್ಯಕ್ತಿತ್ವ, ಕಾಲಘಟ್ಟವನ್ನು ನೋಡಿದರೆ ಇಂತಹ ವ್ಯಕ್ತಿ ಬಾಳಿ ಬದುಕಿದ್ದನ್ನ ಎನ್ನುವ ಯಕ್ಷಪ್ರಶ್ನೆ ಎದುರಾಗುತ್ತದೆ. ದಕ್ಷಿಣ ಭಾರತದಲ್ಲಿಯೇ ಚಿಕ್ಕ ರಾಜನ ದೊಡ್ಡ ಸಾಧನೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಹಂಪಿ ಪ್ರದೇಶದಲ್ಲಿ ವಿಜಯನಗರ ಸ್ಥಾಪನೆಗೆ ಪ್ರೇರಣೆ, ಬಲಿದಾನವಿದೆ. ಕಮ್ಮಟದುರ್ಗ ಅರಸರಲ್ಲಿ ಪ್ರಖ್ಯಾತ ಗಳಿಸಿದ ಕುಮಾರರಾಮ ಜನಮಾನಸದಲ್ಲಿ ಈಗಲೂ ಉಳಿದುಕೊಂಡಿದ್ದಾನೆ. 1356 ರವರೆಗೂ ಯಾವುದೇ ಶಾಸನದಲ್ಲಿ ವಿಜಯನಗರ ಪದವೆ ಇಲ್ಲ. ಕುಮಾರರಾಮನ ಸಂಸ್ಕಾರ, ಚರಿತ್ರೆ ಪಂಥದ ಬಗ್ಗೆ ಮಾತನಾಡುವಾಗ ಕೆಲವು ಪಾತ್ರಗಳಿವೆ. ಜನಪದರಲ್ಲಿ ಉಳಿದಿರುವ ದಾಖಲೆ ಏಕೆ ಚಾರಿತ್ರ್ಯಕ್ಕೆ ಬರುತ್ತಿಲ್ಲ. 19 ನೇ ಶತಮಾನದವರೆಗೂ ಕಮ್ಮಟದುರ್ಗ ಎಲ್ಲಿದೆ ಅನ್ನುವುದೇ ಗೊತ್ತಿಲ್ಲ. ಕುಮಾರರಾಮನ ಕಮ್ಮಟದುರ್ಗದ ಬಗ್ಗೆ ಅನೇಕ ಸಂಶೋಧಕರು ಗಮನ ಸೆಳೆದಿದ್ದಾರೆ. ಹುಲ್ಲೂರು ಶ್ರೀನಿವಾಸಜೋಯಿಸರು ಕುಮಾರರಾಮನ ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆಂದು ಉಲ್ಲೇಖಿಸಿದರು.
ದಕ್ಷಿಣ ಭಾರತ ರಾಜಕಾರಣ ಅಸ್ತಿತ್ವ ಉಳಿಸಿಕೊಂಡಿದೆಯೆಂದರೆ ಶರಣಾಗತಿ, ಕಪ್ಪಕಾಣಿಕೆಯಿಂದ. ಆದರೆ ಕುಮಾರರಾಮ ಕಪ್ಪಕೊಡುವ ಸಹವಾಸವೇ ಬೇಡ ಎನ್ನುವ ಶೂರತ್ವದವನು. ಅರಸುಮನೆಯಿಂದ ರಾಜಕಾರಣವನ್ನು ಸ್ನೇಹದ ಮನೆಗೆ ತಂದು ಜಾತಿ ಮೀರಿದ ವೀರ. ಎಲ್ಲರ ಮನಸ್ಸು ಗೆದ್ದು ಹೋರಾಡಿದನು ಎಂದು ಶ್ಲಾಘಿಸಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್. ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ನಾಯಕ ಸಮಾಜ, ತಳಸಮುದಾಯ, ವಿಜಯನಗರ ಸಾಮ್ರಾಜ್ಯ ಕುರಿತು ಡಾ.ಎಂ.ಕೆ.ದುರುಗಪ್ಪ ಅಧ್ಯಯನ ನಡೆಸಿದ್ದಾರೆ. ಪಿ.ಎಚ್.ಡಿ. ಮುಗಿಸಿದ ಮೇಲೆಯೂ ಸಂಶೋಧನೆಯಲ್ಲಿ ತೊಡಗಿರುವ ಅಪರೂಪದ ವ್ಯಕ್ತಿತ್ವವುಳ್ಳವರು. ಸೃಜನಶೀಲ ಸಾಹಿತಿ. 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ. ಅನೇಕ ಪ್ರಶಸ್ತಿಗಳು ಹುಡುಕೊಂಡು ಬಂದಿವೆ. ಇವರ ಇತಿಹಾಸ, ಸಾಹಿತ್ಯದ ಸೇವೆ ಅನನ್ಯ ಎಂದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ್ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್, ಹಿರಿಯ ನ್ಯಾಯವಾದಿ ಎಚ್.ಎಂ.ಎಸ್.ನಾಯಕ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಪ್ರೊ.ಟಿ.ವಿ.ಸುರೇಶ್ಗುಪ್ತ, ಕೆ.ಆರ್.ಜೆ. ರಾಜ್ಕುಮಾರ್, ಕೃಷ್ಣಮೂರ್ತಿ ಪರಶುರಾಂ, ಸಿ.ಟಿ. ಚಿದಾನಂದಮೂರ್ತಿ, ರಾಜಮದಕರಿನಾಯಕ, ರಂಗಸ್ವಾಮಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಹಾಜರಿದ್ದರು.





