ಚಿತ್ರದುರ್ಗ: ಕೆಎಸ್ಆರ್ಟಿಸಿ ಸಿಬ್ಬಂದಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಅದರಲ್ಲೂ ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ. 38 ತಿಂಗಳ ಬಾಕಿ ವೇತನ ಪಾವತಿ ಮತ್ತು ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ತಕ್ಷಣವೇ ಯೂನಿಯನ್ ಚುನಾವಣೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಙದಿಟ್ಟಿದ್ದಾರೆ. ಈ ಸಂಬಂಧ ನಾಳೆ ಪಾದಯಾತ್ರೆ ನಡೆಸಲಿದ್ದಾರೆ.
ಚಿತ್ರದುರ್ಗದಿಂದ ನಾಳೆ ಪ್ರತಿಭಟನೆ ಆರಂಭವಾಗಲಿದ್ದು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ ಬೆಂಗಳೂರಿಗೆ ಪಾದಯಾತ್ರೆ ನಡೆಸಲಿದ್ದಾರೆ. ಮಾರ್ಚ್ 21 ರಂದು ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದ್ದು, ಅಲ್ಲಿ ಒಕ್ಕೂಟಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲು ಯೋಜಿಸಿವೆ. ನಾಲ್ಕು ನಿಗಮಗಳಿಂದ ಸುಮಾರು 1.15 ಲಕ್ಷ ಉದ್ಯೋಗಿಗಳನ್ನು ಈ ಯೂನಿಯನ್ ಪ್ರನಿಧಿಸಲಿದ್ದು, ಒಟ್ಟಾರೆಯಾಗಿ ಪ್ರತಿದಿನ ಒಂದು ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.
ಈ ಸಂಬಂಧ ಕೆಎಸ್ ಆರ್ ಟಿಸಿ ಎಂಪ್ಲಾಯೀಸ್ ಲೀಗ್ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್, ಕಳೆದ ಮೂರು ವರ್ಷಗಳಿಂದ ಸರ್ಕಾರ ಹಲವು ಬಾರಿ ಸಭೆ ನಡೆಸಿದ್ದರೂ ತಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಇಲ್ಲಿಯವರೆಗೂ ನಮ್ಮ ಬೇಡಿಕೆ ಈಡೇರಿಸುವ ಬದಲು ಕೇವಲ ಮಾತುಕತೆಯಲ್ಲಿ ನಿರತವಾಗಿದೆ. ಸೋಮವಾರ ಎಲ್ಲಾ ನಾಲ್ಗು ನಿಗಮಗಳ ವ್ಯವಸ್ಥಾಪಕರು ನಡೆಸಿದ ಸಭೆಯಲ್ಲಿ ಶೇ.5 ರಷ್ಟು DA ಹೆಚ್ಚಿಸುವ ಆಫರ್ ನೀಡಿದ್ದಾರೆ ಎಂದು ತಿಳಿಸಿದರು.













