Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ಷಿಕಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಿ : ಕೆಆರ್ ಎಸ್ ಪಕ್ಷ ಒತ್ತಾಯ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆ. 29 : ವರ್ಷಿಕಾಳ ಬರ್ಬರ ಹತ್ಯೆ ಪ್ರಕರಣ, ಮಹಿಳೆಯರ ಅತ್ಯಾಚಾರ, ದೌರ್ಜನ್ಯ /ಹತ್ಯೆ ತಡೆಯಲು ತನಿಖೆಯನ್ನು ಶೀಘ್ರಗತಿಯಲ್ಲಿ ಮುಗಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿ ಕೆಆರ್ ಎಸ್ ಪಕ್ಷದ ಮಹಿಳಾ ಘಟಕ ನಗರದಲ್ಲಿ ಇಂದು ಪಾದಯಾತ್ರೆಯನ್ನು ನಡೆಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಚಿತ್ರದುರ್ಗದ 20 ವರ್ಷದ ವರ್ಷಿಕಾಳ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿದೆ ಪ್ರತಿನಿತ್ಯ ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಹಲವಾರು ಪ್ರಕರಣಗಳನ್ನು ಪೊಲೀಸ್ ಠಾಣಾ ಹಂತದಲ್ಲಿಯೆ ರಾಜಿ ಪಂಚಾಯಿತಿ ನಡೆಸಿ ಮುಕ್ತಾಯ ಮಾಡಲಾಗಿ, ಅವುಗಳು ದಾಖಲೆಗೆ ಸಿಗುವುದೆ ಇಲ್ಲ. ಒಬ್ಬ ಮಹಿಳೆ ರಾಜ್ಯದಲ್ಲಿ ಯಾವುದೇ ಭಯವಿಲ್ಲದೇ ಓಡಾಡಲು ಸಾಧ್ಯವಿಲ್ಲ ಅನ್ನುವುದನ್ನು ಚಿತ್ರದುರ್ಗದ ವರ್ಷಿಕಾ ಪ್ರಕರಣ ಸಾಬೀತು ಪಡಿಸಿದೆ. ಇಂತಹ ಪ್ರಕರಣಗಳು ರಾಜ್ಯದಲ್ಲಿ ಸರ್ವೇ ಸಾಮಾನ್ಯ ಅನ್ನುವ ರೀತಿಯ ವಾತಾವರಣ ಸೃಷ್ಠಿಯಾಗಿದೆ. ಇದಕ್ಕೆಲ್ಲಾ ಮೂಲ ಕಾರಣವೇ ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿರುವುದು. ಪೊಲೀಸ್ ಠಾಣೆಯಲ್ಲಿ ಪೊಲೀಸರು ತಮ್ಮ ಕರ್ತವ್ಯ ಮಾಡುವುದನ್ನು ಬಿಟ್ಟು ಹಲವಾರು ರೀತಿಯ ಭ್ರಷ್ಟಾಚಾರಗಳಲ್ಲಿ ನಿರತರಾಗಿ ತಮ್ಮ ಮೂಲ ಉದ್ದೇಶಗಳನ್ನು ಮರೆತಿರುವುದೇ ಇಂತಹ ಘಟನೆಗಳು ಭಯ ಭೀತಿಯಿಲ್ಲದೇ ನಡೆಯುತ್ತಿರುವುದು. ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಶೀಘ್ರಗತಿಯಲ್ಲಿ ತನಿಖೆ ನಡೆಸಿ, ನ್ಯಾಯಕೊಡಿಸುವ ಕೆಲಸ ಮಾಡಿ ಪೊಲೀಸ್ ವ್ಯವಸ್ಥೆಯ ಮೇಲೆ ಹಾಗು ಕಾನೂನಿನ ಬಗ್ಗೆ ಜನರಿಗೆ ನಂಬಿಕೆ ಬರುವಂತಹ ಕೆಲಸ ಆಗಬೇಕು ಎಂದು ಆಗ್ರಹಿಸುತ್ತದೆ.

ಕೆಆರ್ಎಸ್ ಪಕ್ಷ, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಾ ಬರುತ್ತಿದೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಷಯವಾಗಿ 350 ಕಿ. ಮೀ. ಗಳ ಪಾದಯಾತ್ರೆ ಮಾಡಿ ಮಹಿಳಾ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು, ಪ್ರಮುಖವಾಗಿ ಮಹಿಳಾ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ತನಿಖಾದಳ ಸ್ಥಾಪನೆ, ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಹಿಳಾ ದೌರ್ಜನ್ಯದ ಪ್ರಕರಣಗಳ ಪರಿಶೀಲನೆಗೆ ಮತ್ತು ಸಂತ್ರಸ್ತ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಸಹಾಯ ನೀಡಲು “ಸೌಜನ್ಯ ಸುರಕ್ಷಾ ಆಯೋಗ” ಸ್ಥಾಪನೆ ಮಾಡಲು ಆಗ್ರಹಿಸುತ್ತಾ ಬರುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಗಳು ಆಗಿರವುದಿಲ್ಲ ಮತ್ತು ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಹತ್ತು ದಿನಗಳ ಹಿಂದೆ ಬಂದಿರುವ ವರದಿಗಳ ಪ್ರಕಾರ ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 43,052 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಭಯ ಹುಟ್ಟಿಸುವ ರೀತಿಯಲ್ಲಿ ಸರಾಸರಿಯಾಗಿ ದಿನಕ್ಕೆ 45 ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದು ಕೇವಲ 1.18% ಪ್ರಕರಣಗಳಲ್ಲಿ ಮಾತ್ರ. ಇದಕ್ಕೆಲ್ಲಾ ಪ್ರಮುಖ ಕಾರಣ ನಮ್ಮ ಪೊಲೀಸ್ ವ್ಯವಸ್ಥೆ ದಕ್ಷತೆಯಿಂದ ಕೆಲಸ ಮಾಡದೇ ಸಂಪೂರ್ಣವಾಗಿ ಜನವಿರೋಧಿಯಾಗಿ ಕೆಲಸ ಮಾಡುತ್ತಿರುವುದು. ಈ ರೀತಿಯ ವಾತಾವರಣ ಇರುವ ಪೊಲೀಸ್ ವ್ಯವಸ್ಥೆಯಿಂದ ಸಾರ್ವಜನಿಕರ ರಕ್ಷಣೆ ಸಾಧ್ಯವೇ? ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಸರ್ಕಾರಗಳು ತುರ್ತಾಗಿ ಮಾಡಬೇಕು ಎಂದು ಆಗ್ರಹಿಸುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ನಡೆದಂತಹ ಸಂದರ್ಭದಲ್ಲಿ ಅವರಿಗೆ ನ್ಯಾಯ ಒದಗಿಸಬೇಕಾದ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ಕೇವಲ ಬೆದರು ಬೊಂಬೆಗಳಂತೆ ಇದ್ದು, ಅವುಗಳಿಗೆ ನೀಡಿರುವ ಸೀಮಿತ ಅಧಿಕಾರವನ್ನು ಬಳಸಿ, ಜನರ ಹಕ್ಕುಗಳನ್ನು ರಕ್ಷಣೆ ಮಾಡಿರುವ ಪ್ರಕರಣ ವಿರಳಾತಿ ವಿರಳ ಎಂದೆ ಹೇಳಬಹುದು. ಜನರ ಹಕ್ಕುಗಳ ರಕ್ಷಣಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿನ ದುರಾಡಳಿತ ಮತ್ತು ಭ್ರಷ್ಟಾಚಾರವೇ ನೇರವಾಗಿ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ರಾಜ್ಯದ ಜನರು ಅದರಲ್ಲೂ ಮಹಿಳೆಯರು ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ.

ವರ್ಷಿತಾಳ ತಾಯಿ ಹಾಗೂ ಕುಟುಂಬದವರೊಂದಿಗೆ  ಮಹಿಳಾ ರಾಜ್ಯಾಧ್ಯಕ್ಷರಾದ ಆಶಾವಿರೇಶ್ ರಾಜ್ಯ ಕಾರ್ಯಧ್ಯಕ್ಷರಾದ ರಘು ಜಣಗೆರೆ ರಾಜ್ಯ ಜಂಟಿ ಕಾರ್ಯದರ್ಶಿ ಜೀವನ್ ಯುವ ಘಟಕ ರಾಜ್ಯಾಧ್ಯಕ್ಷ ಜನನಿ ವತ್ಸಲ ರಾಜ್ಯ ಕಾರ್ಯದರ್ಶಿ ಹಾಗೂ ಮಹಿಳಾ ಉಸ್ತುವಾರಿ ಇಂದಿರಾ ರೆಡ್ಡಿ, ರಘು ನಂದನ್ ರಾಜ್ಯ ಸಂಘಟನಾ ಕಾರ್ಯದರ್ಶಿ ,ರಾಜ್ಯ ಸಂಘಟನೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ವೀರಭದ್ರಪ್ಪ, ರಾಜ ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಸಿ ಮಹೇಶ್ ನಗರಂಗೆರೆ, ರಾಜ್ಯ ಎಸ್ಸಿ ಎಸ್ಟಿ ಘಟಕ  ರಾಜ್ಯ ಕಾರ್ಯದರ್ಶಿ ನರಸಿಂಹ  ಜಿಲ್ಲಾಧ್ಯಕ್ಷರಾದ ನಾಗರೆಡ್ಡಿ ಬೇಡರೆಡ್ಡಿಹಳ್ಳಿ,  ಪ್ರಧಾನ ಕಾರ್ಯದರ್ಶಿ ಬಾಲರಾಜ ಎಸ್ ಯಾದವ್, ಹಾಗೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಬಳ್ಳಾರಿ ವಿಜಯನಗರ ತುಮಕೂರು ಪದಾಧಿಕಾರಿಗಳು ಹಾಗೂ ಸೈನಿಕರ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment