ಸುದ್ದಿಒನ್, ಚಿತ್ರದುರ್ಗ, ನವೆಂಬರ್. 04 : ಹಿರಿಯೂರು ಜನತೆಗೆ ಕಿರ್ಲೋಸ್ಕರ್ ಸಂಸ್ಥೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹಿರಿಯೂರು ಸ್ಥಾವರ ಅಭಿವೃದ್ಧಿಗೆ ಹೂಡಿಕೆ ಮಾಡಲು ಬರೋಬ್ಬರಿ 3000 ಕೋಟಿ ಹೂಡಿಕೆ ಮಾಡುವ ಮೂಲಕ, ಹಿರಿಯೂರಿನ ಜನತೆಯ ಸಂತಸಕ್ಕೆ ಕಾರಣವಾಗಿದೆ. ಈ ಮೂಲಕ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂಬಿ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಪ್ರಮುಖರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಂಸ್ಥೆಯು ಮುಂದಿನ 3 ವರ್ಷಗಳಲ್ಲಿ ಉಕ್ಕು ತಯಾರಿಕೆಯನ್ನು ವಿಸ್ತರಿಸಲು, ಕಬ್ಬಿಣದ ಅದಿರು ಸಂಸ್ಕರಣೆಯನ್ನು ಹೆಚ್ಚಿಸಲು ಮತ್ತು ಸ್ಪಾಂಜ್ ಪೈಪ್ ಉತ್ಪಾದನೆಗಾಗಿ ಹಿರಿಯೂರು ಸ್ಥಾವರವನ್ನು ಅಭಿವೃದ್ಧಿಪಡಿಸಲು ₹3,000 ಕೋಟಿ ಹೂಡಿಕೆ ಮಾಡಲಿದೆ ಎಂದು ಹೇಳಿದ್ದಾರೆ.
ಜೊತೆಗೆ ಕಿರ್ಲೊಸ್ಕರ್ ಸಂಸ್ಥೆಯಿಂದ ಶೇ. 99% ಕನ್ನಡಿಗರಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದೆ. ಕಳೆದ ಎರಡು ದಶಕಗಳಿಂದ ತನ್ನ ಲಾಭದ ಶೇ. 2ರಷ್ಟು ಅಂಶವನ್ನು ಸಿಎಸ್ಆರ್ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಆರೋಗ್ಯ ಮತ್ತು ಜನಕಲ್ಯಾಣದ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಿರುವುದು ಶ್ಲಾಘನೀಯ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.
