ಬೆಳೆನಷ್ಟ ಮತ್ತು ಬೆಳೆವಿಮೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನವೆಂಬರ್.18 :
2023ನೇ ಸಾಲಿನ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರ ಬರಗಾಲ ಎಂದು ಘೋಷಣೆ ಮಾಡಿದ್ದು, ರೈತರಿಗೆ ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವಲ್ಲಿ ವಿಳಂಬ ಮಾಡುತ್ತಿದ್ದು, ಕೂಡಲೇ ಅನುದಾನವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಆಗ್ರಹಿಸಿದರು.

ಜಿಲ್ಲೆಯು ಸುಮಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ ಹಾಗೂ ಬಯಲುಸಿಮಯ ಜಿಲ್ಲೆ, ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು 2023ನೇ ಸಾಲಿನಲ್ಲಿ ಬರಗಾಲ ಎಂದು ಸರ್ಕಾರ ಎಂದು ಘೋಷಣೆ ಮಾಡಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಬರಪರಿಹಾರದ ಕಾಮಗಾರಿಯನ್ನು ಕೈಗೊಳ್ಳದೆ ಹಾಗೂ ರೈತರ ಬ್ಯಾಂಕ್ ಖಾತೆಗೆ ಬೆಳೆವಿಮೆ, ಬೆಳೆನಷ್ಟ ಪರಿಹಾರವನ್ನು ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡದೆ ವಿಳಂಬ ಮಾಡಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುತ್ತವೆ.

ಹಾಗೂ ಸರ್ಕಾರ ರೈತರ ಪಂಪ್‍ಸೆಟ್‍ಗಳಿಗೆ ರೈತರೇ ಟ್ರಾನ್ಸ್‍ಫಾರಂ ಕಂಬ, ವೈರ್‍ಗಳನ್ನು ಸ್ವಂತ ಖರ್ಚಿನಲ್ಲಿ ಧರಿಸಬೇಕೆಂದು ಸರ್ಕಾರ ಆದೇಶ ಮಾಡಿರುತ್ತದೆ. ಆದ್ದರಿಂದ ಸರ್ಕಾರ ತನ್ನ ಆದೇಶವನ್ನು ವಾಪಾಸ್ ಪಡೆದು ಮೊದಲಿನಂತೆ ಸರ್ಕಾರವೇ ಸದರಿ ಖರ್ಚುಗಳನ್ನು ಧರಿಸಬೇಕೆಂದು ರೈತಸಂಘ ಒತ್ತಾಯಿಸಿತು.

ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಗೋಶಾಲೆಯಲ್ಲಿ ತೆರೆಯಬೇಕು ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ತೊಟ್ಟಿ, ಟ್ಯಾಂಕಗಳನ್ನು ಶುದ್ದಿಗೊಳಿಸಿ, ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಗ್ರಾಮಪಂಚಾಯಿತಿಗಳಿಗೆ ಸೂಚನೆ ನೀಡಬೇಕೆಂದು ಹಾಗೂ ರೈತರು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಸಾಲವಸೂಲಿಯನ್ನು ತಡೆಗಟ್ಟಿ, ಎಲ್ಲಾ ರೈತರ ಬ್ಯಾಂಕ್ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಈ ಪ್ರತಿಭಟನೆಯಲ್ಲಿ ಹಿರಿಯ ಉಪಾಧ್ಯಕ್ಷರಾದ ಕೆ.ಪಿ.ಭೂತಯ್ಯ, ಮುಖಡರುಗಳಾದ ಹೂರಕೇರಪ್ಪ, ಹಂಪಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಿಮ್ಮಣ್ಣ, ರಾಜ್ಯ ಉಪಾಧ್ಯಕ್ಷರಾದ ಶಶಿಕಲಾ, ಮಲ್ಲಿಕಾರ್ಜನ್ ಗಂಗಾಧರಪ್ಪ, ಸುರೇಶ್, ರಾಮಚಂದ್ರಪ್ಪ, ರಾಜಣ್ನ ನಿತ್ಯ ಶ್ರೀ, ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks