ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 09 : ಇತ್ತೀಚಿಗೆ ನಡೆದ ಪರಿಶಿಷ್ಟ ಜಾತಿ ಗಣತಿ ಕಾರ್ಯವನ್ನು ಆಯೋಗ ಸರಿಯಾದ ರೀತಿಯಲ್ಲಿ ನಮ್ಮ ಸಮುದಾಯದ ಜನ ಗಣತಿ ಸರಿಯಾಗಿ ಮಾಡಿಲ್ಲ. ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಛಲವಾದಿ ಸಮುದಾಯವನ್ನು ಕಡಿಮೆ ಸಂಖ್ಯೆ ತೋರಿಸಿದ್ದಾರೆ ಎಂದು ನಗರಸಭೆಯ ಮಾಜಿ ಅಧ್ಯಕ್ಷರು, ಛಲವಾದಿ ಮುಖಂಡರಾದ ನಿರಂಜನಮೂರ್ತಿ ದೂರಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಪ್ರಾರಂಭದಲ್ಲಿ ಗಣತಿದಾರರು ಸರಿಯಾದ ರೀತಿಯಲ್ಲಿ ಗಣತಿ ಕಾರ್ಯ ಮಾಡಿಲ್ಲ. ನಮ್ಮ ಸಮುದಾಯದ ಹಲವಾರು ಬಡಾವಣೆಗಳನ್ನು ಬಿಟ್ಟು ಜಾತಿಗಣತಿ ಮಾಡಿದ್ದಾರೆ. ಉದಾಹರಣೆಗೆ ನಗರದಲ್ಲಿ 50 ಸಾವಿರ ನಮ್ಮ ಸಮುದಾಯದವರಿದ್ದಾರೆ. ಆದರೆ ಕೇವಲ 5 ಸಾವಿರ ನಮೂದಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ನಿಗದಿಯಾಗುತ್ತದೆ.ಆದರೆ ಆಯೋಗವು ನಮ್ಮ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಿದ್ದಾರೆ. ಇದರಿಂದ ನಮಗೆ ಸಿಗುವ ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ನಮಗೂ ಸಹ ಎಲ್ಲಾ ಜನಸಂಖ್ಯೆಯಂತೆ ಮೀಸಲಾತಿಯನ್ನು ನೀಡಬೇಕು. ಶೇ 6% ರಷ್ಟು ಮೀಸಲಾತಿ ನೀಡುವುದರ ಮೂಲಕ ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿ ಕೊಡಬೇಕು.ಜಾತಿ ಗಣತಿ ನಡೆಯುವಾಗ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಆಯೋಗದ ಗಮನಕ್ಕೆ ತಂದರು ಸಹ ಯಾವುದೇ ಕ್ರಮವನ್ನು ಕೈಗೊಳ್ಳದೆ ಹೆಚ್ಚಿನ ಪ್ರಮಾಣದಲ್ಲಿರುವಂತಹ ನಮ್ಮ ಸಮುದಾಯವನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಿದ್ದಾರೆ. ಇದನ್ನು ನಮ್ಮ ಸಮುದಾಯ ಒಪ್ಪುವುದಿಲ್ಲ ಎಲ್ಲಾ ಸಮುದಾಯಗಳಂತೆ ನಮ್ಮ ಸಮುದಾಯಕ್ಕೂ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ನೀಡಬೇಕು.
ಏಕ ಪಕ್ಷಿಯವಾಗಿ ಒಂದು ಸಮುದಾಯವನ್ನು ಒಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ವರದಿ ಸಲ್ಲಿಸಿದ್ದು ಸದರಿ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುತ್ತದೆ. ಜಾತಿಗಣತಿಯನ್ನು ಮಾಡುವವರು ಸಹಾ ಸರಿಯಾದ ರೀತಿಯಲ್ಲಿ ಮನೆ ಮನೆಗೆ ಭೇಟಿ ನೀಡದೆ ಎಲ್ಲೂ ಕುಳಿತು ಸರ್ವೇಯನ್ನು ಮಾಡುವುದರ ಮೂಲಕ ಗಣತಿಯನ್ನು ಮಾಡಿದ್ದಾರೆ ಬೆಂಗಳೂರಿನಂತಹ ಪ್ರದೇಶದಲ್ಲಿ ಮನೆಗೆ ಭೇಟಿ ಮಾಡದೆ ಗಣತಿಯಾಗಿದೆ ಎಂಬ ಚೀಟಿಯನ್ನು ಅಂಟಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳಷ್ಟು ಜನತೆ ತಮ್ಮ ಜಾತಿಯನ್ನು ಹೇಳಿಯೇ ಇಲ್ಲ ಆದರೂ ಸಹಾ ಜಾತಿಗಣತಿಯಾಗಿದೆ ಎಂದು ದೂರಿದರು.
ಜಾತಿಗಣತಿ ಸಮಯದಲ್ಲಿ ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಲವಾರಿ ಬಾರಿ ಮನವಿಯನ್ನು ಮಾಡಲಾಗಿತ್ತು. ಆದರೆ ಅದನ್ನು ಪರಿಗಣಿಸದೇ ಆಯೋಗ ತನ್ನದೆ ಆದ ನಿಲುವನ್ನು ತಗೆದುಕೊಂಡು ಏಕ ಪಕ್ಷೀಯವಾಗಿ ಜಾತಿಗಣತಿಯನ್ನು ಮಾಡಿದೆ. ಸರ್ಕಾರ ಸಲ್ಲಿಸಿರುವ ನ್ಯಾ,ನಾಗಮೋಹನ್ ದಾಸ್ರವರ ವರದಿ ಸರಿಯಿಲ್ಲ, ಇದು ಏಕ ಪಕ್ಷೀಕಯವಾಗಿ ಇದೆ, ಪಕ್ಷಪಾತದಿಂದ ಕೂಡಿದೆ, ಸರ್ಕಾರ ಇದನ್ನು ಒಪ್ಪಿಕೊಳ್ಳದೆ ರಾಜ್ಯ ಸರ್ಕಾರವೂ ಸಚಿವ ಸಂಪುಟದ ಉಪ ಸಮಿತಿಯನ್ನು ರಚನೆ ಮಾಡುವುದರ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.
ಗೋಷ್ಟಿಯಲ್ಲಿ ರವಿಕುಮಾರ್, ಅಣ್ಣಪ್ಪ, ಶಾಂಶಾಕ್, ಜಯರಾವ್, ರಂಗಸ್ವಾಮಿ ಉಪಸ್ಥಿತರಿದ್ದರು.


