ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಕಠಿಣ ಹಾಗೂ ನಿಷ್ಪಕ್ಷಪಾತ ತೀರ್ಪುಗಳಿಗೆ ಹೆಸರಾದವರು. ಪ್ರಸ್ತುತ ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿರುವ ಅವರು, ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ತೀರ್ಪು ನೀಡಿ ಗಮನ ಸೆಳೆದಿದ್ದಾರೆ.

ಹಣಬಲ ಅಥವಾ ಅಧಿಕಾರದ ಒತ್ತಡಕ್ಕೆ ಮಣಿಯದ ನ್ಯಾಯಾಧೀಶರಾಗಿ ಖ್ಯಾತಿ ಪಡೆದಿರುವ ಸಂತೋಷ್ ಭಟ್, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ತೀರ್ಪುಗಳನ್ನು ನೀಡಿದ್ದಾರೆ.ವಿನಯ್ ಕುಲಕರ್ಣಿ ಪ್ರಕರಣದ ಹೊರತಾಗಿಯೂ, ಇತರ ಕೆಲ ಪ್ರಮುಖ ಪ್ರಕರಣಗಳಲ್ಲಿಯೂ ಅವರ ತೀರ್ಪುಗಳು ಚರ್ಚೆಗೆ ಗ್ರಾಸವಾಗಿವೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ತೀರ್ಪು ಜನರಲ್ಲಿ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಬಲಪಡಿಸಿತು.
ಇದೇ ರೀತಿ, ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧವೂ ಅವರು ತೀರ್ಪು ನೀಡಿದ್ದರು. ನಂತರ ಹೈಕೋರ್ಟ್ನಿಂದ ಸತೀಶ್ ಸೈಲ್ಗೆ ಜಾಮೀನು ದೊರಕಿದ್ದರೂ, ಈ ಪ್ರಕರಣವು ಸಾಕಷ್ಟು ಚರ್ಚೆಗೆ ಕಾರಣವಾಯಿತು.ಇನ್ನೂ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ ತೀರ್ಪು ಕೂಡಾ ಗಮನಾರ್ಹವಾಗಿದೆ.
ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಿಎಂ ವಿರುದ್ಧ ತನಿಖೆ ಮುಂದುವರಿಸಲು ಅನುಮತಿ ನೀಡಿದ್ದರು.ಈ ಎಲ್ಲ ತೀರ್ಪುಗಳ ಮೂಲಕ ಸಂತೋಷ್ ಗಜಾನನ ಭಟ್ ಅವರು ನ್ಯಾಯಾಂಗದಲ್ಲಿ ಕಟ್ಟುನಿಟ್ಟಿನ ಹಾಗೂ ನಿರ್ಭೀತ ನ್ಯಾಯಾಧೀಶರಾಗಿ ಗುರುತಿಸಿಕೊಂಡಿದ್ದಾರೆ.
















