ಸುದ್ದಿಒನ್, ಚಿತ್ರದುರ್ಗ, ಮೇ. 07 : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಪ್ರೌಢಶಾಲೆಯು 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಮೂಲಕ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು, ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳ ಮನೆಗೆ ತೆರಳಿ ಸನ್ಮಾನಿಸುವ ಮೂಲಕ ಆಡಳಿತ ಮಂಡಳಿ ವಿಶಿಷ್ಟವಾಗಿ ಸಂಭ್ರಮಿಸಿದೆ.
ಈ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಲಿಖಿತಾ ಆರ್. ಅವರು ರಾಜ್ಯ ಪಠ್ಯಕ್ರಮದಲ್ಲಿ ಒಟ್ಟು 597 (ಶೇ. 95.52) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ. ಅದೇ ರೀತಿ ಮತ್ತೋರ್ವ ವಿದ್ಯಾರ್ಥಿ ಯೋಗೇಶ್ ದತ್ತ ಅವರು ಐಸಿಎಸ್ಇ ಪಠ್ಯ ಕ್ರಮದಲ್ಲಿ ಶೇ. 92.2 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆಯು ಗ್ರಾಮಸ್ಥರ ಹಾಗೂ ಶಾಲೆಯ ಹೆಮ್ಮೆಗೆ ಕಾರಣವಾಗಿದೆ.

ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಶ್ಲಾಘಿಸಿದ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ರೆಡ್ಡಿ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಸುಹಾಸಿನಿ ವೆಂಕಟೇಶ್ ರೆಡ್ಡಿ ಅವರು, ವಿದ್ಯಾರ್ಥಿಗಳ ಮನೆಗೇ ಭೇಟಿ ನೀಡಿ ಅವರಿಗೆ ಹೂಗುಚ್ಛ ನೀಡಿ, ಸಿಹಿ ಹಂಚಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಶಾಲೆಯ ಮಕ್ಕಳು ಉತ್ತಮ ಅಂಕ ಗಳಿಸಿ ಸಾಧನೆ ಮಾಡಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ. ಇವರ ಮುಂದಿನ ವಿದ್ಯಾಭ್ಯಾಸಕ್ಕೆ ನಮ್ಮ ಸಂಪೂರ್ಣ ಸಹಕಾರವಿರಲಿದೆ,” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ವಿಜಯಶ್ರೀ ಡಿ., ಮುಖ್ಯೋಪಾಧ್ಯಾಯರಾದ ಸಲ್ಮಾ ಬಿ., ಹಾಗೂ ಶಿಕ್ಷಕ ವೃಂದದವರಾದ ಮುಜಾಬಿಲ್, ಸಂತೋಷ್, ಬಸಮ್ಮ, ಅಶ್ವಿನಿ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ಪೋಷಕರು ಶಾಲೆಯ ಈ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.



















