ಚಿತ್ರದುರ್ಗದಲ್ಲಿ ಮೊದಲನೇ ಬಾರಿಗೆ ವಿಜೃಂಭಣೆಯಿಂದ ನಡೆದ ಜಗನ್ನಾಥ ರಥಯಾತ್ರೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.23) : ಇಸ್ಕಾನ್ ವತಿಯಿಂದ ಪ್ರಪ್ರಥಮ ಬಾರಿ ಚಿತ್ರದುರ್ಗದಲ್ಲಿ ಶುಕ್ರವಾರ ಜಗನ್ನಾಥ ರಥಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಒರಿಸ್ಸಾದಲ್ಲಿ ನಡೆಯುವ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಜೆ.ಸಿ.ಆರ್. ಸರ್ಕಲ್‍ನಿಂದ ಹೊರಟ ಜಗನ್ನಾಥ ರಥಯಾತ್ರೆಯಲ್ಲಿ ಭಗವಂತ ಜಗನ್ನಾಥ, ಬಲದೇವ ಹಾಗೂ ಸುಭದ್ರದೇವಿಯ ಮೂರ್ತಿಯಿರಿಸಿ ಬಗೆಬಗೆಯ ಹೂವು ಹಾರಗಳಿಂದ ಅಲಂಕರಿಸಲಾಗಿತ್ತು. ಪುರುಷ ಮಹಿಳೆ ಎನ್ನುವ ತಾರತಮ್ಯವಿಲ್ಲದೆ ಸಾವಿರಾರು ಭಕ್ತರು ನೆರೆದಿದ್ದು, ಕುಣಿದು ಜಗನ್ನಾಥನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಯಾತ್ರೆಯ ರಥ ಹೊರಡುತ್ತಿದ್ದಂತೆ ಒಂದು ಕಡೆ ಮಹಿಳೆಯರು ಮತ್ತೊಂದು ಕಡೆ ಪುರುಷರು ಹಗ್ಗವನ್ನು ಹಿಡಿದು ರಥಯಾತ್ರೆಯನ್ನು ಎಳೆದುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು.

ಜೆ.ಸಿ.ಆರ್.ವೃತ್ತದಲ್ಲಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು.
ನೆರೆದಿದ್ದ ಭಕ್ತರು ಹರೆ ಕೃಷ್ಣ, ಹರೆ ಕೃಷ್ಣ, ಕೃಷ್ಣ, ಕೃಷ್ಣ ಹರೆ ಹರೆ. ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ ಎನ್ನುವ ನಾಮಸ್ಮರಣೆಗೆ ಹೆಜ್ಜೆ ಹಾಕುತ್ತ ರಥಯಾತ್ರೆಯಲ್ಲಿ ಭಾವಪರವಶವಾದರು.
ತಾಳ, ತಂಬೂರಿ, ತಬಲ ಹಾಗೂ ವಿವಿಧ ಬಗೆಯ ವೇಷ ಭೂಷಣಗಳನ್ನು ಧರಿಸಿದ್ದ ಪುಟಾಣಿ ಮಕ್ಕಳು ರಥಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು.

ಜೆ.ಸಿ.ಆರ್.ಸರ್ಕಲ್‍ನಿಂದ ಹೊರಟ ಜಗನ್ನಾಥ ರಥಯಾತ್ರೆ, ಡಿ.ಸಿ.ಸರ್ಕಲ್, ಮದಕರಿವೃತ್ತ, ರಂಗಯ್ಯನಬಾಗಿಲು, ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಗಾಂಧಿ ಸರ್ಕಲ್, ಎಸ್.ಬಿ.ಎಂ.ಸರ್ಕಲ್ ಮೂಲಕ ಕಾಟಮ್ಮ ವೀರನಾಗಪ್ಪ ಕಲ್ಯಾಣ ಮಂಟಪ ತಲುಪಿತು.

Share This Article
Leave a Comment

Leave a Reply

Your email address will not be published. Required fields are marked *