ಸುದ್ದಿಒನ್, ಹಿರಿಯೂರು, ನವೆಂಬರ್. 04 : ಮಾತೃಭಾಷೆ ಕನ್ನಡ ನೆಲದ ಭಾಷೆ ಅನ್ನದ ಭಾಷೆ. ಹೃದಯದ ಭಾಷೆ. ಕನ್ನಡಕ್ಕೆ ಪ್ರಾಚೀನ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆಯ ಜೊತೆಗೆ ಸುಂದರ ಲಿಪಿಯನ್ನು ಹೊಂದಿರುವ ಭಾಷೆಯಾಗಿದ್ದು, ಮಾತೃಭಾಷೆಯನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಜವನಗೊಂಡನಹಳ್ಳಿ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕನ್ನಡ ಪ್ರಜ್ಞೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಭಾಷೆಯಿಂದ ಮಾತ್ರ ನಮ್ಮಲ್ಲಿರುವ ಕಷ್ಟ ಸುಖ, ದುಃಖ ದುಮ್ಮಾನ ಹಂಚಿಕೊಳ್ಳುವ ಜೊತೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಎದೆಯ ಭಾಷೆಯಾದ ಕನ್ನಡ ಉಳಿಯಬೇಕಾದರೆ ಕನ್ನಡದ ಪ್ರಜ್ಞೆ ಜಾಗೃತವಾಗಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಪ್ರೊಫೆಸರ್ ಜಿ. ಶರಣಪ್ಪ ಮಾತನಾಡಿ ಕರ್ನಾಟಕದಲ್ಲಿ ಅನ್ಯ ಭಾಷೆಗಳನ್ನು ಒಪ್ಪಿಕೊಳ್ಳುವ ಮತ್ತು ಹಪ್ಪಿಕೊಳ್ಳುವ ಸಂಸ್ಕೃತಿ ಸಂಸ್ಕಾರದಿಂದ ವಿಶ್ವಕ್ಕೆ ಕರ್ನಾಟಕ ಮಾದರಿ ರಾಜ್ಯವಾಗಿದೆ. ಕನ್ನಡ ಉಳಿಯಬೇಕಾದರೆ ನಾಡಿನ ನೆಲ, ಜಲ, ಸಂಪತ್ತಿನ ರಕ್ಷಣೆಗೆ ನಾವೆಲ್ಲರೂ ಹೋರಾಟ ಮಾಡಬೇಕು ಹೇಳಿದರು.
ಹೆಚ್ ಎಸ್ ಶಫಿವುಲ್ಲಾ ಉಪನ್ಯಾಸ ನೀಡಿ ಕನ್ನಡ ನಾಡು ವೈಭವದ ಬೀಡು, ಕವಿಗಳು, ಕಲಾವಿದರು, ಸಂತರು, ಶರಣರು ಜನ್ಮ ನೀಡಿದ ನಾಡು ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಶಾಸ್ತ್ರೀಯ ಸ್ಥಾನಮಾನದ ಗೌರವ ಕೂಡ ಬಂದಿದೆ. ಆದಿ ಕವಿ ಪಂಪನಿಂದ ಹಿಡಿದು ಆಧುನಿಕ ಕವಿ ಹಂಪ ನಾ ವರೆಗೆ ಸಮೃದ್ಧಿಯಾಗಿ ಬೆಳೆದಿದೆ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಚ್ಚು ಹೊತ್ತು ಕೊಡುತ್ತಿದೆ ಪ್ರಸ್ತುತ ಈಗಿನ ಮಕ್ಕಳಲ್ಲಿ ಯುವಕರಲ್ಲಿ ಸಾರ್ವಜನಿಕರಲ್ಲಿ ಭಾಷಾಭಿಮಾನ ಬೆಳೆಸಬೇಕಿದೆ. ನಾಡಿನ ಇತಿಹಾಸ ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಆರ್ ಟಿ. ಶ್ರೀನಿವಾಸ್, ಕಸಾಪ ಅಧ್ಯಕ್ಷ ಸಿ. ರಾಮಚಂದ್ರಪ್ಪ, ಕಸಾಪ ಜಿಲ್ಲಾ ಸಲಹಾ ಸಮಿತಿ ಸದಸ್ಯ ಹರ್ತಿ ಕೋಟೆ ಮಹಾಸ್ವಾಮಿ, ನಿವೃತ್ತ ಶಿಕ್ಷಕ ಗುರುಮೂರ್ತಿ, ತಾಲೂಕು ಕಸಾಪ ವಿಶೇಷ ಪ್ರತಿನಿಧಿ ವೇದ ಪುಷ್ಪ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ರಾಘವೇಂದ್ರ, ಮುಖ್ಯ ಶಿಕ್ಷಕ ರಾಕೇಶ್, ಕರಾಟೆ ಶಿಕ್ಷಕ ರಂಗಸ್ವಾಮಿ, ದೈಹಿಕ ಶಿಕ್ಷಕ ಹರಳಪ್ಪ, ಶಿಕ್ಷಕರಾದ ಗುರು ಶಾಂತಮ್ಮ,ಶಾಹಿನಾ, ಶಕೀಲಾ ಅಹ್ಮದ್, ಅಮೂಲ್ಯ ಇದ್ದರು.
