ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 08 : ರಾಜ್ಯ ಸರ್ಕಾರ ಆರಂಭಿಸಿರುವ ಒಳ ಮೀಸಲಾತಿ ಗಣತಿಗೆ ಅಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡುತ್ತಿದ್ದು, ಬಿಳಿ ಹಾಳೆ ಮೇಲೆ ದತ್ತಾಂಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮೊಬೈಲ್ ಆಪ್ ಮೂಲಕ ಗಣತಿಯಾಗಬೇಕೆಂದು ಬಂಜಾರ(ಲಂಬಾಣಿ) ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ಕುಮಾರ್ ಒತ್ತಾಯಿಸಿದ್ದಾರೆ.


ಪ್ರವಾಸಿ ಮಂದಿರದಲ್ಲಿ ಬುಧವಾರ ಬಂಜಾರ(ಲಂಬಾಣಿ) ಜನಾಂಗದ ಸಭೆ ನಡೆಸಿ ಮಾತನಾಡಿದರು. ಒಳ ಮೀಸಲಾತಿ ಸಮೀಕ್ಷೆಗೆ ಆಯೋಗವನ್ನು ಸರ್ಕಾರ ಕಳಿಸಿರುವುದು ಸ್ವಾಗತಾರ್ಹ. ಆದರೆ ಸರ್ವರ್ ಇಲ್ಲ ಎನ್ನುವ ನೆಪ ಹೇಳಿ ಕಾಗದದ ಮೇಲೆ ಮಾಹಿತಿ ಪಡೆದುಕೊಳ್ಳುವುದು ವೈಜ್ಞಾನಿಕ ಕ್ರಮವಲ್ಲ. ತಾಂಡಾಗಳಲ್ಲಿ ಲಂಬಾಣಿ ಜನಾಂಗ ಎಚ್ಚೆತ್ತುಕೊಂಡು ಮೊಬೈಲ್ ಆಪ್ ಮೂಲಕವೇ ಗಣತಿಯಾಬೇಕೆಂದು ಪಟ್ಟು ಹಿಡಿಯಬೇಕೆಂದು ಜಾಗೃತಿಗೊಳಿಸಿದರು.
ತಾಂಡಾಗಳಲ್ಲಿ ಗಣತಿಗೆ ಹೋಗುವ ಅಧಿಕಾರಿಗಳು ದಿಕ್ಕುತಪ್ಪಿಸುತ್ತಿದ್ದಾರೆಂದು ಸಾಕಷ್ಟು ಕರೆಗಳು ಬರುತ್ತಿವೆ. ಸರ್ವರ್ ಇಲ್ಲ ಎಂದು ಯಾವುದೇ ಕಾರಣಕ್ಕೂ ಹೇಳುವಂತಿಲ್ಲ. ಕೂಲಿಗಾಗಿ ವಲಸೆ ಹೋಗಿರುವ ಬಂಜಾರ ಜನಾಂಗ ತಮ್ಮ ತಮ್ಮ ತಾಂಡಾಗಳಿಗೆ ಹಿಂದಿರುಗಿ ಒಳ ಮೀಸಲಾತಿ ಜಾತಿ ಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ನಿಖರವಾದ ಅಂಕಿ ಅಂಶಗಳನ್ನು ನೀಡುವಂತೆ ಎಂ.ಸತೀಶ್ಕುಮಾರ್ ವಿನಂತಿಸಿದರು.
ಕದರೇಶ್, ಸಂತೋಷ್, ಗಿರೀಶ್, ಓಂಕಾರ್ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಕೂಬ್ಯಾನಾಯ್ಕ, ಪ್ರದೀಪ್ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.


















