ಚಿತ್ರದುರ್ಗ. ಏ.9: ಭಾರತ ಜನಗಣತಿ ನಿರ್ದೇಶನಾಲಯದ ಸೂಚನೆಯಂತೆ ಭಾರತದ ಜನಗಣತಿ-2027ರ ಕಾರ್ಯಕ್ಕೆ ಸಂಬಂಧಿಸಿದಂತೆ ‘ಸ್ವಯಂ ಗಣತಿ’ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
2026ರ ಏಪ್ರಿಲ್ 01 ರಿಂದ ಸ್ವಯಂ ಗಣತಿ ಕಾರ್ಯ ಪ್ರಾರಂಭವಾಗಿದ್ದು, ಏಪ್ರಿಲ್ 15 ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಸ್ವಯಂ ಪ್ರೇರಿತರಾಗಿ ಇಲಾಖೆಯ ಅಧಿಕೃತ ಜಾಲತಾಣ www.se.census.gov.in ಗೆ ಭೇಟಿ ನೀಡಿ ಕೈಗೊಳ್ಳಬಹುದಾಗಿದೆ.

ಸ್ವಯಂ ಗಣತಿ ಸಾರ್ವಜನಿಕರಿಗೆ ಸುರಕ್ಷಿತ ಆನ್ಲೈನ್ ಪೋರ್ಟಲ್ ಮೂಲಕ ತಮ್ಮದೇ ಆದ ಮಾಹಿತಿಯನ್ನು ಭರ್ತಿ ಮಾಡಲು ಮತ್ತು ಸಲ್ಲಿಸಲು ಅನುಮತಿ ಮಾಡಿಕೊಡುತ್ತದೆ. ಈ ಪ್ರಕ್ರಿಯೆ ಮೂಲಕ ಸಿಗುವ ‘ರೆಫರೆನ್ಸ್ ಐಡಿ’ (Reference ID) ಅನ್ನು ನಾಗರಿಕರು ಕಡ್ಡಾಯವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು. 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ನಿಗಧಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಯ ಸಮಯದಲ್ಲಿ ಮೌಲ್ಯೀಕರಣಕ್ಕಾಗಿ ಗಣತಿದಾರರು ನಿಮ್ಮ ಕುಟುಂಬಕ್ಕೆ ಭೇಟಿ ನೀಡಿದಾಗ ರೆಫರೆನ್ಸ್ ಐಡಿ ನೀಡಿ ಜನಗಣತಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ.




















