ಸುದ್ದಿಒನ್, ಚಿತ್ರದುರ್ಗ. ಮಾ. 25 : ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ. ಇಂದು ಅಟೋ ರಿಕ್ಷಾದಿಂದ ಅಂತರಿಕ್ಷಾ ತಲುಪುವ ರಾಕೆಟನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಶೋಷಣೆಯ ವಿರುದ್ಧವಾಗಲಿ, ದೌರ್ಜನ್ಯದ ವಿರುದ್ಧವಾಗಲಿ ದನಿ ಎತ್ತಿ ಎದುರಿಸಬೇಕು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿ ಕೊಳ್ಳಲು ಸಾಧ್ಯವಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರು, ಉಪನ್ಯಾಸಕರಾದ ಶ್ರೀಮತಿ ನಿರ್ಮಲ ಮರಡಿಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದವತಿಯಿಂದ ಮಂಗಳವಾರ ಸಂಜೆ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಶಿವಶಿಂಪಿ ಮಹಿಳಾ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಮಹಿಳೆಯರ ಶಿಕ್ಷಣ ಮತ್ತು ಜೀವನ’ದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಈ ಹಿಂದೆ ಮಹಿಳೆಯರು ಕೇವಲ ಗೃಹ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು ಸ್ವತಂತ್ರದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನವನ್ನು ನೀಡಿದೆ. ಕಾನೂನಿನ ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ದ ಮಹಿಳೆಯರು ಹೋರಾಡುವುದು ಬಹಳ ಮುಖ್ಯವಾಗಿದ್ದು ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಮಹಿಳೆಯರು ಕುಟುಂಬದಲ್ಲಿ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜದಲ್ಲೂ ಕೆಲಸ ನಿರ್ವಹಿಸಿ, ಮನೆ ಮತ್ತು ಲೋಕದ ದೀಪವನ್ನು ಬೆಳಗಿಸುವ ಶಕ್ತಿಯಾಗಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು ಎಂದರು.
ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ. ಇಂದು ಅಟೋ ರಿಕ್ಷಾದಿಂದ ಅಂತರಿಕ್ಷಾ ತಲುಪುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ದೆ ಇದೆ ಎಂಬುದನ್ನು ಎತ್ತಿ ತೋರುತ್ತದೆ ಹೆಣ್ಣು ಶಕ್ತಿಯ ಪ್ರತೀಕವಾಗಿದ್ದು, ಯಾರಲ್ಲಿಯೂ ಅವಲಂಬಿತವಾಗದೆ ಸ್ವತಂತ್ರವಾಗಿ, ಆತ್ಮ ವಿಶ್ವಾಸದಿಂದ ಬದುಕುವ ಶಕ್ತಿ ಬೆಳೆಸಿಕೊಳ್ಳಬೇಕು. ಶೋಷಣೆಯ ವಿರುದ್ಧವಾಗಲಿ, ದೌರ್ಜನ್ಯದ ವಿರುದ್ಧವಾಗಲಿ ದನಿ ಎತ್ತಿ ಎದುರಿಸಬೇಕು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದ್ದು, ಮಹಿಳೆಯರು ಯಾವುದಕ್ಕೂ ಎದೆಗುಂದದೆ ಯಾರ ಮೇಲೂ ಅವಲಂಬಿತರಾಗದೆ ಗುರಿ ಇಟ್ಟುಕೊಂಡು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಸಮಾಜದಲ್ಲಿ ಹೆಣ್ಣು ಮಕ್ಕಳೆಂದರೆ ಕೀಳರಿಮೆ ಇದೆ. ಅದನ್ನು ಮೆಟ್ಟಿ ನಿಲ್ಲಲು ಮಹಿಳೆಯರು ಸಿದ್ಧರಿರಬೇಕು. ನಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಜಾಗೃತರಾಗಬೇಕು ಗಟ್ಟಿತನ ಬೆಳೆಸಿಕೊಂಡು ಏನೇ ಕಷ್ಟಬಂದರು ಎದುರಿಸಿ ಮಾನಸಿಕವಾಗಿ ಸದೃಢರಾಗಿ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು ನಿರ್ಮಲ ಮರಡಿಹಳ್ಳಿ ತಿಳಿಸಿದರು.
ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಜಿಲ್ಲಾಧ್ಯಕ್ಷರಾದ ಶುಂಭುಲಿಂಗಪ್ಪ ಮಾತನಾಡಿ, ಇಂದಿನ ದಿನಮಾನದಲ್ಲಿ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕಾದ ಅನಿವಾರ್ಯತೆ ಇದೆ ಮನೆಯಲ್ಲಿ ಬಸವಣ್ಣರವರ ಪೂಜೆಯನ್ನು ಮಾಡಿ ದಿನಕ್ಕೆ ಒಂದಾದರೂ ವಚನವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಮುಸ್ಲಿಂರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ, ಜೈನ್ರು ತಮ್ಮ ಮಕ್ಕಳನ್ನು ದಿನಕ್ಕೆ ಒಂದು ಬಾರಿಯಾದರೂ ಮಂದಿರಕ್ಕೆ ಕಳುಹಿಸುತ್ತಾರೆ, ಇದೇ ರೀತಿ ನಮ್ಮ ಸಮಾಜದ ಮಕ್ಕಳನ್ನು ದಿನಕ್ಕೆ ಒಂದು ಬಾರಿಯಾದರೂ ದೇವಾಲಯಕ್ಕೆ ಕಳುಹಿಸಬೇಕು, ಇಂತಹ ಕಾರ್ಯಕ್ರಮಗಳಿಗೆ ಕರೆ ತರಬೇಕಿದೆ ಅವರಿಗೆ ನಮ್ಮವರು, ತಮ್ಮವರು ಯಾರು ಎಂಬುದು ಗೊತ್ತಾಗಬೇಕಿದೆ ಇದೇ ರೀತಿ ಆಂಗ್ಲ ಭಾಷಾ ಸಂಸ್ಕøತಿಯಾದ ಅಚಿಟಿ, ಅಂಕಲ್ ಎಂಬ ಸಂಸ್ಕøತಿಯನ್ನು ಬಿಡಿ ನಮ್ಮ ಹಿಂದಿನ ಕಾಲದ ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ, ಅತ್ತೇ, ಮಾವ ಸೋದರತ್ತೆ ಸೋದರಮಾವ ಎಂಬುದನ್ನು ಕಲಿಸುವಂತೆ ತಾಯಂದಿರಲ್ಲಿ ಮನವಿ ಮಾಡಿದರು.

ವಿಶ್ವ ಮಹಿಳಾ ದಿನಾಚರಣೆ ಶಿವಶಿಂಪಿ ಮಹಿಳಾ ಸಂಭ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಇಂದಿರಾ ಜಯದೇವಮೂರ್ತಿ ವಹಿಸಿದ್ದರು. ಕಾರ್ಯದರ್ಶಿ ಶ್ರೀಮತಿ ಶೈಲ ವಿಜಯಕುಮಾರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಗರದ ಭರತನಾಟ್ಯ ಕಲಾವಿದೆ ಕುಮಾರಿ ಎಸ್.ಎಂ. ಚಂದನರವರನ್ನು ಸನ್ಮಾನಿಸಲಾಯಿತು. ಹಾಗೂ ಭರತನಾಟ್ಯ ವನ್ನು ಪ್ರದರ್ಶನ ಮಾಡಿದರು. ಸಮಾರಂಭದ ನಂತರ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಸೌಮ್ಯ ಸ್ವಾಮಿ ಸುಧಾ ಪ್ರಾರ್ಥಿಸಿದರೆ, ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ ಖಂಜಾಚಿ ನಿರ್ಮಲ ಬಸವರಾಜು ಸ್ವಾಗತಿಸಿದರು, ಶ್ರೀಮತಿ ನಂದ ಬಕ್ಕೇಶ್ ಪ್ರಸ್ತಾವಿಕ ನುಡಿ ಹಾಗೂ ಶ್ರೀಮತಿ ಗೌರಮ್ಮ ಬಸವರಾಜು ಸಂಘದ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಶ್ರೀಮತಿ ಮಂಗಳ ವೀರಣ್ಣ ವಂದಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ಮಾಜಿ ಅಧ್ಯಕ್ಷರಾದ ಜಯದೇವ ಮೂರ್ತಿ, ಮಲ್ಲಿಕಾರ್ಜನ್, ವಿಜಯಕುಮಾರ್, ಕಣ್ವಕುಪ್ಪಿ ನಾಗರಾಜ್, ಮುರುಗೇಶ್, ಕೊಟ್ರಬಸಪ್ಪ, ಶೇಖರ್, ಕೋಟ್ರೇಶ್ ಸೇರಿದಂತೆ ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.







