ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ರಂಗಭೂಮಿಯು ಶಿಕ್ಷಕರಲ್ಲಿ ಅವಧಾನ ಮತ್ತು ನಿರಂತರ ತೊಡಗಿಸಿಕೊಳ್ಳುವಿಕೆಯ ಗುಣವನ್ನು ಬೆಳೆಸುತ್ತದೆ. ಬಹುಮುಖೀ ವ್ಯಕ್ತಿತ್ವದ ಶಿಕ್ಷಕರು ಸಾಂಸ್ಕøತಿಕ ರಾಯಭಾರಿಗಳು. ಸ್ಪಷ್ಟಮಾತು, ಆರೋಗ್ಯಕರ ದೇಹದ ನಿಲುವನ್ನು ಹೊಂದಿರಬೇಕು. ನಾಯಕತ್ವದ ಗುಣಗಳನ್ನು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕಲಿಕೆ ಮತ್ತು ಬೋಧನೆಯಲ್ಲಿ ತೊಡಗಿದರೆ ಶಿಕ್ಷಣದಲ್ಲಿ ಗುಣಾತ್ಮಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಹುರುಳಿ.ಎಮ್. ಬಸವರಾಜ್ ತಿಳಿಸಿದರು.
ಪಿಳ್ಳೇಕೆರೆನಹಳ್ಳಿ ಗ್ರಾಮದ ಬಾಪೂಜಿ ಸಮೂಹ ಸಂಸ್ಥೆಗಳ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ -26 ಪ್ರಯುಕ್ತ ಶಿಕ್ಷಣದಲ್ಲಿ ರಂಗಕಲೆ ರಂಗಭೂಮಿ ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ, ರಂಗಸಂದೇಶ ಹಾಗೂ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ರಂಗಭೂಮಿಯ ಸಾಧ್ಯತೆಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಶಿಕ್ಷಣದ ಪಠ್ಯಗಳು ರಂಗಭೂಮಿಯ ತಂತ್ರಗಾರಿಕೆಯಲ್ಲಿ ಪಠ್ಯೇತರ ವಸ್ತುಗಳಾಗಿ ಮಾರ್ಪಾಡಾಗಬೇಕು. ಆಧುನಿಕ ಸಾಧನಗಳ ಮೂಲಕ ಬದಲಾಗುತ್ತಿರುವ ಮಾನವ ಸಂಬಂಧಗಳ ಅಪಾಯದ ಅರಿವು ಶಿಕ್ಷಕರಲ್ಲಿಬೇಕು. ಶಿಕ್ಷಣವು ಸಾಂಸ್ಕøತಿಕ ಮನೋಭಾವದ ಅನನ್ಯತೆಯ ಪ್ರತೀಕವಾಗಿದೆ. ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆಯನ್ನು ನೀಡುತ್ತವೆ. ಶಿಕ್ಷಕರು ತಮ್ಮ ಕಲಿಕೆಯನ್ನು ನಿರಂತರಗೊಳಿಸಬೇಕು, ಮೊಟುಕುಗೊಳಿಸಬಾರದು. ಸೃಜನಶೀಲ ಚಿಂತನೆ, ಸಂವಹನಾ ಕೌಶಲ, ಸಾಂಸ್ಕøತಿಕ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ. ಪ್ರಶಿಕ್ಷಣಾರ್ಥಿಗಳು ವಿಭಿನ್ನ ರೀತಿಯ ಆಲೋಚನೆಗಳನ್ನು ಪಠ್ಯಾಧಾರಿತ ವಿಷಯಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಮ್.ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜೀವನವೊಂದು ನಾಟಕ ರಂಗ, ನಾವೆಲ್ಲರೂ ಪಾತ್ರಧಾರಿಗಳು. ರಂಗಭೂಮಿ ಕಲಾವಿದರು ಸಂಕಷ್ಟಗಳನ್ನು ನುಂಗಿ ಪ್ರೇಕ್ಷಕರಿಗೆ ವಾಸ್ತವದ ಜೀವನಮೌಲ್ಯಗಳನ್ನು ಪ್ರಾಯೋಗಿಕವಾಗಿ ಅಭಿನಯಿಸಿ ಅರಿವು ಮೂಡಿಸುತ್ತಾರೆ. ರಂಗ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಭದ್ರತೆಯನ್ನು ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು. ಪಠ್ಯಾಧಾರಿತ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಶಾಲೆಗಳಲ್ಲಿ ನಾಟಕ ಶಿಕ್ಷಕರ ಅಗತ್ಯತೆ ಇದೆ. ದಯವಿಟ್ಟು ಸರ್ಕಾರ ಈ ವಿಷಯವನ್ನು ಮನಗಂಡು ಕಾರ್ಯೋನ್ಮೂಖವಾಗಬೇಕು ಎಂದರು. ಸಂಘದ ಅಧ್ಯಕ್ಷ ಡಾ.ಕೆ ಮೋಹನ್ ಕುಮಾರ್ ಮಾತನಾಡಿ ಶಿಕ್ಷಣ ಮತ್ತು ರಂಗಭೂಮಿ ಮನುಕುಲವನ್ನು ಹಸನುಗೊಳಿಸುತ್ತದೆ. ಪ್ರತಿಯೊಬ್ಬ ಶಿಕ್ಷಕರು ರಂಗಭೂಮಿಯ ತಂತ್ರಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂಆರ್.ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ, ಹಿರಿಯ ರಂಗಭೂಮಿ ಕಲಾವಿದ ಕೆ.ಜಂಬುನಾಥ್, ಹಿರಿಯ ಸಾಹಿತಿ ಪರಮೇಶ್ವರಪ್ಪ ಕುದುರಿ, ಹಿರಿಯ ಕಲಾವಿದ ಚಂದ್ರಾರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪಪ್ರಾಚಾರ್ಯ ಹೆಚ್.ಎನ್. ಶಿವಕುಮಾರ್, ಪ್ರಾಧ್ಯಾಪಕರಾದ ಡಾ,ಜಿ.ಹನುಮಂತರೆಡ್ಡಿ, ಟಿ.ವೈ.ಗೀತ, ತಂಜೀಮ, ಎಸ್.ಮಂಜುನಾಥಪ್ಪ, ಓ.ಎಮ್. ಮಂಜುನಾಥ, ದೈ.ಶಿ. ಡಾ.ಆರ್.ಗಿರೀಶ್, ನಿವೃತ್ತ ನೌಕರ ರಾಜಶೇಖರ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.

ಅಮೇರಿಕನ್ ಪ್ರಾಯೋಗಿಕ ರಂಗಭೂಮಿಯ ಅತ್ಯಂತ ಪ್ರಭಾವಶಾಲಿ ಥಿಯೇಟರ್ ಕಂಪನಿ ದಿ ವೂಸ್ಟರ್ ಗ್ರೂಪ್ ಸ್ಥಾಪಕ ಹಾಗೂ ಹಿರಿಯ ರಂಗಕರ್ಮಿ ವಿಲ್ ಯೆಮ್ ಡೆಪೋ ಪ್ರಪಂಚಕ್ಕೆ ನೀಡಿದ ವಿಶ್ವರಂಗಭೂಮಿ ಸಂದೇಶವನ್ನು ರಂಗನಿರ್ದೇಶಕ ಕೆ.ಪಿ.ಎಮ್.ಗಣೇಶಯ್ಯ ವಾಚನ ಮಾಡಿದರು. ವಿದ್ಯಾವಾರಿಧಿ ತ.ರಾ.ಸುಬ್ಬರಾವ್ (ತ.ರಾ.ಸು) ಪರಿಚಯ ಲೇಖನವನ್ನು ಪ್ರಶಿಕ್ಷಣಾರ್ಥಿ ಬಿ.ಮಲ್ಲಿಕಾರ್ಜುನ ಗೌಡ ವಾಚಿಸಿದರು.

ರಂಗಸೌರಭ ಕಲಾವಿದರು ಚಂದ್ರಶೇಖರ ಕಂಬಾರರ ಸೋಮಲಿಂಗನ ಗುಡಿ ಮ್ಯಾಲ ಬಂಗಾರ ಛಡಿ ಮ್ಯಾಲ ಬಂಗಾರ ಛಡಿಯಾ, ಏನಹೇಳಲವ್ವಾ ಭಾರತಿ, ಮೂಡಿಬಾರಯ್ಯಾ ಹಾಗೂ ಬಿ.ವಿ.ಕಾರಂತ ಸಂಗೀತ ಸಂಯೋಜನೆಯ ಗೋಕುಲ ನಿರ್ಗಮನ ನಾಟಕದ ಬರುತಿಹನೇ ನೋಡೆ, ಎಲ್ಲವಳೆಲ್ಲವಳೆಲ್ಲವಳು, ಯಯಾತಿ ನಾಟಕದ ಗಜವದನಾ ಹೇರಂಭಾ, ಹೆಚ್.ಎಸ್.ವಿ ಯವರ ಚಿನ್ನ ಕನಸೇ ಉಳುಕೋ ಕಡೆವರೆಗೂ ಮುಂತಾದ ರಂಗಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಪ್ರಶಿಕ್ಷಣಾರ್ಥಿಗಳಾದ ಕೆ.ಸಿ.ರೇಖಾ ಪ್ರಾರ್ಥಿಸಿದರು, ಮೇಘನಾ.ಎಮ್ ಸ್ವಾಗತಿಸಿದರು, ಉಷಾ ಮೋರೆ ವಂದಿಸಿದರು, ಆರ್.ಮಧು ನಿರೂಪಿಸಿದರು. ಕೊನೆಯಲ್ಲಿ ನೀನಾಸಂ ಪದವೀಧರ ಕೆ.ಪಿ.ಎಂ.ಗಣೇಶಯ್ಯ ಇವರ ರಂಗ ನಿರ್ದೇಶನದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ, ನವರಸ, ಚಿತ್ರಕಲೆ ಎಂಬ ತಂಡಗಳನ್ನು ರಚಿಸಿಕೊಂಡು, ಮೂಢನಂಬಿಕೆ, ಅನಕ್ಷರತೆ, ನಿರುದ್ಯೋಗ, ಬಾಲ್ಯ ವಿವಾಹ, ಜಾತಿ ಪದ್ಧತಿ ಹಾಗೂ ವರದಕ್ಷಿಣೆ ನಾಟಕಗಳಿಗೆ ತಾಲೀಮು ನಡೆಸಿದರು.







