ಮಹಿಳೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಬಲಶಾಲಿಯಾದರೆ ಇಡೀ ಕುಟುಂಬವೆ ಸದೃಢವಾದಂತೆ : ಕೆ.ಎಸ್.ನವೀನ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದ ಮಹಿಳೆ ಈಗ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿರುವುದರಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಗಾಟಿಸಿ ಮಾತನಾಡಿದರು.

ವೀರವನಿತೆ ಒನಕೆ ಓಬವ್ವ, ಕಿತ್ತೂರುರಾಣಿಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಇವರುಗಳೆಲ್ಲಾ ಸಂಕೋಲೆಯನ್ನು ತೊರೆದು ದೇಶ ಸೇವೆಗಾಗಿ ಹೋರಾಡಿದ ದಿಟ್ಟ ಮಹಿಳೆಯರು. 21 ನೇ ಶತಮಾನ ಮಹಿಳೆಯರ ಶತಮಾನ. ಮಹಿಳೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಬಲಶಾಲಿಯಾದರೆ ಇಡಿ ಕುಟುಂಬವೆ ಸದೃಢವಾದಂತೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆರವರು ದೂರದೃಷ್ಟಿಯಿಂದ ಚಿಂತಿಸಿ ಮಹಿಳೆಯರ ಮೇಲೆ ನಂಬಿಕೆಯಿಟ್ಟು ಬ್ಯಾಂಕ್‍ಗಳಿಂದ ಸಾಲ ಸಿಗುವಂತ ವ್ಯವಸ್ಥೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ. ಜೀವನದಲ್ಲಿ ಏನಾದರೂ ತೊಂದರೆ ಸಮಸ್ಯೆಗಳು ಎದುರಾದಾಗ ಮನಸ್ಸಿನಲ್ಲಿ ಚಿಂತೆಯಿಟ್ಟುಕೊಳ್ಳುವ ಬದಲು ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ದೇಶದಲ್ಲಿ ಆರ್ಥಿಕ ಕ್ರಾಂತಿಯಾಗುತ್ತಿರುವುದರ ಲಾಭ ಪಡೆದುಕೊಳ್ಳುವಂತೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೆ.ಎಸ್.ನವೀನ್ ಕರೆ ನೀಡಿದರು.

ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರನ್ನು ಸ್ವಾವಲಂಭಿಯನ್ನಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ನಾಡಿನಾದ್ಯಂತ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಸಹಿಸದ ಕೆಲವು ಪಟ್ಟಭದ್ರರು. ಯೂಟೂಬ್‍ನಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರಹೆಗಡೆರವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹೋರಾಟದ ಮೂಲಕ ಅಂತಹವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಂಗವಿಕಲರಿಗೆ ಮಾಶಾಸನ, ವಿದ್ಯಾರ್ಥಿವೇತನ, ನಿರಾಶ್ರಿತರಿಗೆ ವಾತ್ಸಲ್ಯ ಮನೆ ಕಟ್ಟಿಸಿಕೊಡುವುದು, ವಯೋವೃದ್ದರಿಗೆ ವಾಟರ್‍ಬೆಡ್ ಇನ್ನಿತರೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದುಪಯೋಗಪಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಂಡಿದ್ದಾರೆಂದು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡುತ್ತ ಒಕ್ಕೂಟದ ಪದಾಧಿಕಾರಿಗಳ ಸಂಘವನ್ನು ಬಲಪಡಿಸುವ ಉದ್ದೇಶವಿಟ್ಟುಕೊಂಡು ಸಮಾವೇಶಗಳನ್ನು ನಡೆಸಲಾಗುತ್ತಿದೆ. ಕಾರ್ಯಕರ್ತರ ಸಹಭಾಗಿತ್ವದಲ್ಲಿ ಯೋಜನೆಯ ವಿವಿಧ ಸೌಲಭ್ಯಗಳನ್ನು ಪಾಲುದಾರರಿಗೆ ತಲುಪಿಸುವುದು ಸುಲಭವಾಗುತ್ತದೆ. ಜಿಲ್ಲೆಯಲ್ಲಿ 25 ಸಾವಿರ ಸಂಘಗಳಿದ್ದು, ತಾಲ್ಲೂಕಿನಲ್ಲಿ ಆರುವರೆ ಸಾವಿರ ಸಂಘಗಳಿದೆ. ಸಂಘಟನೆ ಗಟ್ಟಿಗೊಳ್ಳಲು ಒಕ್ಕೂಟದ ಪದಾಧಿಕಾರಿಗಳಲ್ಲಿರುವ ಪ್ರಾಮಾಣಿಕತೆ ಕಾರಣ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರ ಸಾಧನೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಯೂಟೂಬ್‍ನಲ್ಲಿ ಧಕ್ಕೆ ತರಲು ಹೊರಟಿರುವುದರಲ್ಲಿ ಸತ್ಯಾಂಶವಿಲ್ಲವೆಂದು ಒಕ್ಕೂಟದ ಪದಾಧಿಕಾರಿಗಳು ಅರ್ಥಮಾಡಿಕೊಂಡು ಸಂಘಟನೆಯನ್ನು ಸದೃಢಗೊಳಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ 6751 ಪ್ರಗತಿ ಬಂಧು ಸ್ವಸಹಾಯ ಸಂಘಗಳಿದ್ದು, 62759 ಸದಸ್ಯರುಗಳಿದ್ದಾರೆ. 35 ಕೋಟಿ 11 ಲಕ್ಷ ರೂ.ಉಳಿತಾಯವಾಗಿದೆ. ಡಾ.ಡಿ.ವೀರೇಂದ್ರಹೆಗಡೆರವರು ಕೇವಲ ಸ್ವಸಹಾಯ ಸಂಘಗಳ ಮಹಿಳೆಯರಿಗಷ್ಟೆ ಅಲ್ಲ. ವೃದ್ದರಿಗೆ, ನಿರಾಶ್ರಿತರಿಗೆ, ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಒಕ್ಕೂಟದ ಪದಾಧಿಕಾರಿಗಳು ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ತಿಳಿಸಿದರು.

ಬ್ಯಾಂಕ್ ಆಫ್ ಬರೋಡ ಚಿತ್ರದುರ್ಗ ಶಾಖೆಯ ಸಹಾಯಕ ಪ್ರಬಂಧಕರಾದ ಶ್ರೀಮತಿ ಮಧುಶ್ರಿ, ಸುಬ್ಬಾರೆಡ್ಡಿ, ಸುರೇಂದ್ರ ವೇದಿಕೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks