ಗೌರಸಮುದ್ರ ಮಾರಮ್ಮ ದೇವಸ್ಥಾನದ ಹುಂಡಿ ಎಣಿಕೆ : 10 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹ

2 Min Read

ಚಿತ್ರದುರ್ಗ. ಆ.27 : ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಗೌರಸಮುದ್ರ ಗ್ರಾಮದ ಶ್ರೀ ಮಾರಮ್ಮದೇವಿ ದೇವಸ್ಥಾನದಲ್ಲಿ ಬರೋಬ್ಬರಿ

ಒಟ್ಟು 10,66,441-00 ( ಹತ್ತು ಲಕ್ಷದ ಅರವತ್ತು ಸಾವಿರದ ನಾಲ್ಕು ನೂರಾ ನಲವತ್ತೊಂದು ರೂಪಾಯಿ ) ಕಾಣಿಕೆಯನ್ನು ಭಕ್ತಾಧಿಗಳು ಅರ್ಪಿಸಿದ್ದಾರೆ.

ರೂ. 10,36,360 ರೂ.‌ ನೋಟುಗಳು ಮತ್ತು ರೂ 30081ರೂ ನಾಣ್ಯ ಸಂಗ್ರಹವಾಗಿದೆ. ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 02 ರಿಂದ 04 ರವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 01ರಂದು ಹುತ್ತಕ್ಕೆ ಅಭಿಷೇಕ, ಸೆ.02ರಂದು ಮೂಲ ಸನ್ನಿಧಿಗೆ ಅಭಿಷೇಕ, ಸೆ.03ರಂದು ಮಾರಮ್ಮ ದೇವಿಯು ತುಂಬಲಿಗೆ ಆಗಮಿಸಿ ಗೌರಸಮುದ್ರಕ್ಕೆ ವಾಪಸ್ಸಾಗುವುದು. ನಂತರ ರಾತ್ರಿಯೆಲ್ಲಾ ಊರಿನಲ್ಲಿ ದೇವಿಯ ಮೆರವಣಿಗೆ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಸೆ.04ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಶ್ರೀ ಮಾರಮ್ಮ ದೇವಿ ಮರಕ್ಕೆ ಪೂಜೆ, ಸೆ.05ರಂದು ರಾತ್ರಿ 8.30ಕ್ಕೆ ಓಕಳಿ ನಂತರ ಶ್ರೀ ಮಾರಮ್ಮದೇವಿಗೆ ಮಹಾ ಮಂಗಳಾರತಿ ನಂತರ ಮೆರವಣಿಗೆಯೊಂದಿಗೆ ದೇವಿಯ ಗರ್ಭಗುಡಿಯ ಪ್ರವೇಶ ನಡೆಯಲಿದೆ.

ಭಕ್ತಾಧಿಗಳಲ್ಲಿ ವಿಶೇಷ ಸೂಚನೆ : ಹರಕೆ ಮಾಡಿಕೊಂಡ ಭಕ್ತಾಧಿಗಳು ತುಂಬಲಿಗೆ ಹಾಗೂ ಗೌರಸಮುದ್ರದ ಮೂಲ ದೇವಸ್ಥಾನದಲ್ಲಿ ಎರಡೂ ಕಡೆ ಶ್ರೀದೇವಿಗೆ ಹಾಕುವ ಬೆಳ್ಳಿ ಬಂಗಾರದ ಒಡವೆ, ಸೀರೆ ಇತ್ಯಾದಿ ವಸ್ತ್ರಾಭರಣಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಿರುವ ಹುಂಡಿಯಲ್ಲಿಯೇ ಕಾಣಿಕೆಗಳನ್ನು ಹಾಕುವುದು.

ಉಳ್ಳೇಗೆಡ್ಡೆ(ಈರುಳ್ಳಿ)ಗಳನ್ನು ದೇವಿಗೆ ಜೋರಾಗಿ ಎಸೆಯುವುದರಿಂದ ದೇವಿಯ ಒಡವೆಗಳು ಕೆಳಗೆ ಬೀಳುತ್ತವೆ. ಜನರಿಗೆ ಕಣ್ಣು ಮತ್ತು ಮುಖಕ್ಕೆ ಪೆಟ್ಟು ಬಿದ್ದು ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಭಕ್ತಾಧಿಗಳು ಈರುಳ್ಳಿಯನ್ನು ದೇವಿಯ ಸನ್ನಿಧಿಗೆ ಮಾತ್ರ ಅರ್ಪಿಸುವುದು. ಗೌರಸಮುದ್ರ ಗ್ರಾಮ ಪಂಚಾಯಿತಿಯಿಂದ ನೀರಿನ ಸೌಕರ್ಯ, ಸ್ಥಳಗಳ ಸೌಕರ್ಯ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿರುವುದರಿಂದ ಅದನ್ನು ಸದುಪಯೋಗ ಪಡೆದುಕೊಳ್ಳುವುದು. ಹರಕೆ ಮಾಡಿಕೊಂಡ ಭಕ್ತಾಧಿಗಳು ದೇವಿಗೆ ಹಾಕುವ ಒಡವೆಗಳ ಬದಲಿಗೆ ನಗದು ಹಣವನ್ನು ಪೂಜಾರಿ ಕೈಗೆ ಕೊಡದೇ ತುಂಬಲಲ್ಲಿ ಮರದ ಕೆಳಗೆ ಇರುವ ಹಾಗೂ ಗೌರಸಮುದ್ರದ ಮೂಲ ದೇವಸ್ಥಾನದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಯಲ್ಲಿ ಮಾತ್ರ ಹಾಕುವುದು. ಅಕ್ಕಿ ಬೇಳೆಯನ್ನು ಅರ್ಚಕರಿಗೆ ಕೊಡುವಾಗ ಅದರಲ್ಲಿ ಇರತಕ್ಕಂತಹ ಮುಡುಪು, ಕಣ್ಣು, ಕೋರೆ ಮೀಸೆಗಳನ್ನು ಕಾಣಿಕೆ ಹುಂಡಿಯಲ್ಲಿ ಮಾತ್ರ ಹಾಕುವುದು. ಭಕ್ತಾಧಿಗಳು ತಮ್ಮೊಂದಿಗೆ ಜಾತ್ರೆಗೆ ಕರೆತರುವ ಚಿಕ್ಕಮಕ್ಕಳ ಬಗ್ಗೆ ಅವರುಗಳು ತಪ್ಪಿಸಿಕೊಳ್ಳದಂತೆ ನಿಗಾ ಇಡುವುದು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಾತ್ರೆಯಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದೆ.

ಅಂತೆಯೇ ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದು. ಅಕ್ಟೋಬರ್ 01ರಂದು “ಮರಿಪರಿಷೆ” (ತಿಂಗಳ ಜಾತ್ರೆ) ನಡೆಯಲಿದೆ.

ಜಾತ್ರೆ ಮಹೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಸಂಸದ ಗೋವಿಂದ ಎಂ ಕಾರಜೊಳ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ.ಯೋಗೀಶ್ ಬಾಬು, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷೆ ಸವಿತಾ ರಘು, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹೆಚ್.ಬಸವರಾಜೇಂದ್ರ, ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಓಬಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಭಾಗವಹಿಸುವರು ಎಂದು ಚಳ್ಳಕೆರೆ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks