ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 09 : ಮಾನವನ ಅತಿಯಾದ ಆಸೆ,ದುರಾಸೆ, ಸುಖದ ಜೀವನಕ್ಕೆ ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ ಮತ್ತು ಮಾಲಿನ್ಯ ಹೆಚ್ಚಾಗುತ್ತಿದೆ, ಇದರಿಂದ ಭೂಮಿಯ ತಾಪಮಾನವು ಸಹ ಹೆಚ್ಚಾಗುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಶ್ರೀಮತಿ ಪಲ್ಲವಿ ತಿಳಿಸಿದರು.
ಐಯುಡಿಪಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿತ್ರದುರ್ಗ ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಸಸಿ ನೆಡುವ ಮತ್ತು ಮಕ್ಕಳಿಗೆ ಬಟ್ಟೆ ಚೀಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೂನ್ ಐದರಂದು ಇಡೀ ವಿಶ್ವಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಇಂದು ಮಾನವನ ಅತಿಯಾದ ಸುಖಕ್ಕೆ ಪರಿಸರ ನಾಶವಾಗುತ್ತಿದೆ. ಹೆಚ್ಚು ಮಳೆ ಬರಬೇಕು ಎಂದರೆ ಹೆಚ್ಚು ಮರಗಳನ್ನ ನೆಟ್ಟು ಬೆಳೆಸಿ, ಹಸರೀಕರಣ ಗೊಳಿಸಬೇಕಿದೆ. ಕುಡಿಯುವ ನೀರಿನ ಬಾಟಲಿಗಳನ್ನ ಬಳಸಿ ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಸ್ವಚ್ಛತೆಯನ್ನ ನಿರ್ಲಕ್ಷಿಸುತ್ತಿದ್ದೇವೆ, ಪ್ಲಾಸ್ಟಿಕ್ ಬಳಸುವುದರಿಂದ ಮೂಕ ಪ್ರಾಣಿಗಳಾದ ಹಸುಗಳು ಅದನ್ನು ತಿಂದು ಜೀವ ಕಳೆದುಕೊಳ್ಳುತ್ತಿವೆ, ಮುಂದಿನ ಪೀಳಿಗೆಗೆ ಸಹ ನಾವು ಪರಿಸರ ಸಂರಕ್ಷಿಸುವ, ಪ್ರೀತಿಸುವ ಗುಣವನ್ನು ಬಳಸಿಕೊಳ್ಳಬೇಕಾಗಿದೆ, ಭೂಮಿ, ನೀರು, ಅಗ್ನಿ, ವಾಯು, ಆಕಾಶವು, ಮಾನವ ಕುಲದ ಅಥವಾ ಸಕಲ ಜೀವಿಗಳಿಗೂ ತನ್ನದೇ ಆದ ಕೊಡುಗೆಯನ್ನು ನೀಡಿದೆ, ನೀಡುತ್ತಲೇ ಇದೆ. ಪ್ರಕೃತಿಯಿಂದ ನಾವು, ನಮ್ಮಿಂದ ಪ್ರಕೃತಿ ಇಲ್ಲ ಎಂಬ ಪ್ರಜ್ಞೆ ನಮಗಿರಬೇಕು, ಈ ವರ್ಷದ ಘೋಷವಾಕ್ಯ ಪ್ರಕೃತಿಯಿಂದ ಪ್ರೇರಿತ, ಹವಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ದ್ಯೇಯದೊಂದಿಗೆ ಕೆಲಸ ಮಾಡಬೇಕಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕರಾದ ಗೌಸ್ ಫಯಾಜ್ ಪರಿಸರ ಸಂರಕ್ಷಣೆ ಮೂಲಕ ಭವಿಷ್ಯದ ಪೀಳಿಗೆ ಬಗ್ಗೆ ಎಚ್ಚರ ವಹಿಸಬೇಕಿದೆ, ಪರಿಸರ ರಕ್ಷಣೆ ಎಂಬುದು ಸರ್ಕಾರ, ಕಾನೂನು, ಸಂಘ ಸಂಸ್ಥೆಗಳಿಗೆ ಸೀಮಿತವಲ್ಲ, ಅದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದರು.
ಉಪ ಪರಿಸರ ಅಧಿಕಾರಿಗಳಾದ ಪಿ ರಾಜೇಶ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಜಾನ್ ಮೈನ್ಸ ಪರಿಸರ ಅಧಿಕಾರಿ ಅಜಿತ್, ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೆ, ಶಾಲಾ ಶಿಕ್ಷಕರಾದ ಅನುಸೂಯಮ್ಮ, ತಿಪ್ಪೇಸ್ವಾಮಿ, ಪ್ರಸಾದ್, ಅಕ್ಕಮಹಾದೇವಿ, ಪ್ರಸನ್ನ ಹಾಗೂ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶಾಲೆಯ ಎಲ್ಲಾ ಮಕ್ಕಳಿಗೆ ಕಲಾ ಚೈತನ್ಯ ಸೇವಾ ಸಂಸ್ಥೆವತಿಯಿಂದ ಬಟ್ಟೆ ಕೈ ಚೀಲಗಳನ್ನು ವಿತರಿಸಲಾಯಿತು.












