ಬೆಂಗಳೂರು: ಶಕ್ತಿಸೌಧದಲ್ಲಿ ಚಿನ್ನ ಕಳ್ಳತನವಾಗಿರುವುದು ಸದ್ಯಕ್ಕೆ ಎಲ್ಲರಿಗೂ ಶಾಕಿಂಗ್ ಎನಿಸಿದೆ. ನಗರಾಭಿವೃದ್ಧಿ ಸಚಿವ ಸುರೇಶ್ ಅವರ ಕಚೇರಿಯಲ್ಲಿಯೇ ಕಳ್ಳತನ ನಡೆದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬುವವರು ಚಿನ್ನಾಭರಣ ಹಾಗೂ ನಗದು ಇದ್ದಂತ ಕೈಚೀಲವನ್ನು ತಂದಿದ್ದರು. ಆದರೆ ಕೆಲಸ ಮುಗಿಸಿ ಹೋಗುವಾಗ ಅದನ್ನ ಕಚೇರಿಯಲ್ಲಿಯೇ ಮರೆತು ಹೋಗಿದ್ದರು.
ಆದರೆ ಮಾರನೇ ದಿನ ನೆನಪು ಮಾಡಿಕೊಂಡು ಬಂದು ನೋಡಿದಾಗ ಕೈಚೀಲ ಕಾಣೆಯಾಗಿದೆ. ಅದರಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ಕ್ಯಾಶ್ ಕೂಡ ಇತ್ತಂತೆ. ಕಳ್ಳತನವಾಗಿದೆ ಎಂದು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗಾಗಲೇ ಈ ಸಂಬಂಧ ವಿಧಾನಸೌಧ ಪೊಲೀಸರು ತನಿಖೆ ಕೂಡ ಶುರು ಮಾಡಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಡಿ ಗ್ರೂಪ್ ನೌಕರನ ಪಾತ್ರ ಇರುವುದು ಪೊಲೀಸರಿಗೆ ಗೊತ್ತಾಗಿದೆ. ಆ ನೌಕರ ಕೈ ಚೀಲ ಹಿಡಿದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ಸಿಸಿಟಿವಿ ಸಾಕ್ಷ್ಯ ಆಧಾರದ ಮೇಲೆ ಪೊಲೀಸರು ಆ ನೌಕರನನ್ನ ಬಂಧಿಸಿದ್ದಾರೆ. ಇದೆಲ್ಲಾ ಬೆಳವಣಿಗೆ ಏನೆ ಇದ್ದರೂ, ಒಳಗೆ ಇಷ್ಟೆಲ್ಲಾ ಆಭರಣ ಹಾಗೂ ಹಣ ತೆಗೆದುಕೊಂಡು ಹೋದಾಗ ತಪಾಸಣೆ ನಡೆಯುತ್ತೆ. ಆಗಲೂ ಏನು ಗೊತ್ತಾಗಿಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ಸಚಿವ ಕೊಠಡಿಯೊಳಗೆ ಕಳ್ಳತನವಾಗಿದ್ದು ಮಾತ್ರ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಪ್ರತಿದಿನ ಅಲ್ಲಿ ಕೆಲಸ ಮಾಡುವವರಿಗೆ ಸಿಸಿಟಿವಿ ಇರೋದು ಗೊತ್ತಿಲ್ಲದೆ ಇರುತ್ತಾ..? ಸಿಕ್ಕಿ ಬೀಳ್ತೀನಿ ಎಂಬ ಭಯವೇ ಇಲ್ಲದೆ ತೆಗೆದುಕೊಂಡು ಹೋದರಾ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












