ಸುದ್ದಿಒನ್, ಮಾರ್ಚ್. 17 : ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನಿಸಿ, ದೇವಸ್ಥಾನದ ಬಾಗಿಲಿಗೆ ಬೆಂಕಿ ಹಚ್ಚಿ ಹಾನಿ ಉಂಟುಮಾಡಿದ್ದ ಆರೋಪಿಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಗಳ ಸಾದಾ ಶಿಕ್ಷೆ
ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಖಲಂದರ್ (35 ವರ್ಷ) ಶಿಕ್ಷೆಗೊಳಪಟ್ಟ ಆರೋಪಿ.

ಪ್ರಕರಣದ ಸಾರಾಂಶ:
ಹೊಸದುರ್ಗ ತಾಲ್ಲೂಕುನಲ್ಲಿರುವ ಶ್ರೀಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಿ:26-12-2023 ರಂದು ಬೆಳಗಿನ ಜಾವ 1-30 ಗಂಟೆಗೆ ಹೊಸದುರ್ಗ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಸಮೀಪ ನಿರವಗಲ್ಲು ಬೇಜಾರ್ ಗ್ರಾಮದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಹುಂಡಿಯನ್ನು ಕಳುವು ಮಾಡುವ ಉದ್ದೇಶದಿಂದ ದೇವಸ್ಥಾನದ ಕಛೇರಿಯ ಬೀಗವನ್ನು ಕಬ್ಬಿಣದ ರಾಡಿನಿಂದ ಮುರಿದು, ಒಳಗೆ ಪ್ರವೇಶ ಮಾಡಿ, ಬೀರುವನ್ನು ಸಹ ಹೊಡೆದು, ಯಾವುದೇ ಹಣ ಮತ್ತು ಒಡವೆಗಳು ಸಿಗದಿದ್ದಾಗ, ದೇವಸ್ಥಾನದ ಮುಖ್ಯ ದ್ವಾರದ ಮರದ ಬಾಗಿಲಿಗೆ ಅಳವಡಿಸಿದ್ದ ಸ್ಟೀಲ್ ಗೇಟನ್ನು ಮುರಿದು ಮರದ ಬಾಗಿಲನ್ನು ಮುರಿಯಲು ಪ್ರಯತ್ನಿಸಿ ಮುರಿಯದೇ ಇದ್ದಾಗ ಮರದ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಳ್ಳತನ ಮಾಡಲು ಪ್ರಯತ್ನಿಸಿ, ದೇವಸ್ಥಾನದ ಮರದ ಬಾಗಿಲು ಸುಟ್ಟು ಸುಮಾರು ರೂ.50,000/- ನಷ್ಟ ಉಂಟು ಮಾಡಿರುತ್ತಾರೆಂದು ದೇವಸ್ಥಾನದ ಸಮಿತಿಯವರು ದಿ: 26-12-2023 ರಂದು ಶ್ರೀರಾಂಪುರ ಪೋಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಈ ದೂರಿನ ಮೇರೆಗೆ ತನಿಖಾಧಿಕಾರಿಗಳಾದ ಮಧು ಪಿ.ಬಿ, ಪೋಲೀಸ್ ಉಪನಿರೀಕ್ಷಕರು ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದರು.
ನಂತರ ಪ್ರಕರಣವು ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಗೊಂಡಿದ್ದು, ಸಾಕ್ಷಿದಾರರ ಮೂಲಕ ಆರೋಪಿತನಾದ ಖಲಂದರ್ ದೇವಸ್ಥಾನದ ಹುಂಡಿಯನ್ನು ಕಳುವು ಮಾಡಲು ಪ್ರಯತ್ನಿಸಿ ದೇವಸ್ಥಾನದ ಮರದ ಬಾಗಿಲು ಸುಟ್ಟು ಸುಮಾರು 50,000/- ನಷ್ಟ ಮಾಡಿರುವುದು ಸಾಬೀತಾಗಿದ್ದರಿಂದ ಆರೋಪಿತನಿಗೆ 7 ವರ್ಷ ಸಾದಾಶಿಕ್ಷೆ, ರೂ.20,000/- ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ತಪ್ಪಿದ್ದಲ್ಲಿ 2 ತಿಂಗಳು ಸಾದಾಶಿಕ್ಷೆ ವಿಧಿಸಿದೆ.
ದಂಡದ ಮೊತ್ತ ರೂ.50,000/-ರಲ್ಲಿ ರೂ. 40,000/- ದೇವಸ್ಥಾನಕ್ಕೆ, ಉಳಿದ ರೂ. 10,000/- ಹಣವನ್ನು ಸರ್ಕಾರಕ್ಕೆ ಜಮಾ ಮಾಡತಕ್ಕದ್ದೆಂದು ಆದೇಶಿಸಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರೋಣಾ ವಾಸುದೇವ್ ಅವರು ಇಂದು (ಮಾರ್ಚ್. 17) ತೀರ್ಪನ್ನು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಎನ್.ಎಸ್. ಮಲ್ಲಯ್ಯ ಇವರು ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















