ಸುದ್ದಿಒನ್, ಹಿರಿಯೂರು, ಆಗಸ್ಟ್. 05 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 1220 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯ 123.30 ಅಡಿ ತಲುಪಿದೆ.
ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರ ಮಳೆ ನೀರಿನ ಜೊತೆಗೆ ಭದ್ರಾ ಯೋಜನೆ ನೀರು ಡ್ಯಾಂಗೆ ಹರಿದು ಬರುತ್ತಿದೆ. ಇದರಿಂದ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಜಲಾಶಯಕ್ಕೆ ಮೊದಲ ಬಾರಿಗೆ ಒಳಹರಿವು ನೀರು ಹರಿದು ಬಂದಂತಾಗಿದೆ.
ಜನವರಿಯಲ್ಲಿ ಕೋಡಿ : ಭದ್ರಾ ನೀರು ಹರಿಸಿದ ಪರಿಣಾಮವಾಗಿ ಕಳೆದ ಜನವರಿಯಲ್ಲಿ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಿತ್ತು. ಇದೀಗ ಜಲಾಶಯಕ್ಕೆ ಹೆಚ್ಚು ಮಳೆಯಾಗಿ 6.30 ಅಡಿ ನೀರು ಬಂದರೆ ಡ್ಯಾಂ ನಾಲ್ಕನೇ ಬಾರಿಗೆ ಕೋಡಿ ಬಿಳಲಿದ್ದು, ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಡ್ಯಾಂ
ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಮಳೆ ವರದಿ : ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಈಶ್ವರಗೆರೆಯಲ್ಲಿ 96.04 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ.
ಹದವಾದ ಮಳೆಯಾಗಿದ್ದು, ಹೂವಿನಹೊಳೆ ಹಳ್ಳ ತುಂಬಿ ಹರಿದಿದೆ. ಕಸವನಹಳ್ಳಿ ಬ್ಯಾರೇಜ್ ಕೂಡ ತುಂಬಿ ತುಳುಕುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಶ್ವರಗೆರೆಯಲ್ಲಿ 96.04 ಎಂಎಂ, ಬಬ್ಬೂರು 78.8ಎಂಎಂ, ಇಕ್ಕನೂರು 66.4ಎಂಎಂ, ಹಿರಿಯೂರು 54.6 ಎಂಎಂ, ಹಾಗೂ ಸೂಗೂರಿನಲ್ಲಿ 54.2 ಮಿಲಿ ಮೀಟರ್ ಮಳೆಯಾಗಿರುವುದು ವರದಿಯಾಗಿದೆ.



