ಧಾರವಾಡಲ್ಲಿ ಶನಿವಾರ ಸಂಜೆ ಆಲಿಕಲ್ಲು ಸಹಿತ ಭಾರಿ ಮಳೆ ಆಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದಿದ್ದ ಉತ್ತರ ಕರ್ನಾಟಕದ ಜನತೆಗೆ ವರುಣ ತಂಪೆರೆದಿದ್ದಾನೆ. ಧಾರವಾಡದ ಕೆಲವೆಡೆ ಸಾಧಾರಣ ಮಳೆ ಆದರೆ, ನಗರದಲ್ಲಿ ಭಾರೀ ಮಳೆ ಆಗಿದೆ. ಆದರೆ ಗಾಳಿ ಜೋರಾಗಿ ಬೀಸಿದ್ದರಿಂದ ರೈತರಿಗೆ ಮಾವಿನ ಬೆಳೆಗೆ ಈ ಮಳೆ ಕಂಟಕವಾಗಲಿದೆಯೇ ಎಂಬ ಆತಂಕ ಉಂಉ ಮಾಡಿತ್ತು. ಇನ್ನು, ಧಾರವಾಡ ಮಾತ್ರವಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಸಹ ಮಳೆ ಎಂಟ್ರಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳ, ಗುರುವಾಯುನಕರೆ, ಕಾಜೂರು, ಕಿಲ್ಲೂರು ಸೇರಿ ಅನೇಕ ಕಡೆ ಗುಡುಗು ಸಹಿತ ಭಾರೀ ಮಳೆ ಆಗಿದೆ.
ಸದ್ಯ ಕಳೆ ದಿನ ಧಾರವಾಡ ಮತ್ತು ದಕ್ಷಿಣ ಕನ್ನಡದ ಕೆಲವೆಡೆ ಮಾತ್ರ ಮಳೆ ಆಗಿದ್ದು, ಇಂದು ಮತ್ತು ನಾಳೆ ಅಂದರೆ ಮುಂದಿನ ಎರಡು ದಿನಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೀಗಾಗಿ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ, ಗದಗ, ಹುಬ್ಬಳ್ಳಿ-ಧಾರವಾಡದಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಅಲ್ಲದೇ ಮುಂದಿನ ಒಂದು ವಾರದ ಕಾಲ ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅಂದರೆ ಮಾರ್ಚ್ 17ರಿಂದ 19ರ ತನಕ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ನಾಳೆ (ಮಾರ್ಚ್ 16) ಉತ್ತರ ಕನ್ನಡ, ಉಡುಪಿ, ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಶಿವಮೊಗ್ಗ ಬೆಂಗಳೂರು ನಗರದಲ್ಲಿ ಲಘು ಮಳೆ ನಿರೀಕ್ಷೆಯಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದ್ದು, ಈಗಾಗಲೇ ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರದಲ್ಲಿ ದಾಖಲೆಯ ಗರಿಷ್ಠ 37°C ತಾಪಾಮಾನ ಏರಿಕೆ ಆಗಿರುವುದರಿಂದ ಮಧ್ಯಾಹ್ನದ ವೇಳೆ ಹೊರಗಡೆ ಬಿಸಿಲಿಗೆ ಹೋಗುವದನ್ನು ಆದಷ್ಟು ಕಡಿಮೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.















