ಲಖನೌ: ಜ್ಞಾನವಾಪಿ ಮಸೀದಿ ವಿವಾದದ ವಿಚಾರಣೆ ಐದನೇ ದಿನವಾದ ಇಂದು ಮುಂದುವರೆಯಲಿದೆ. ವಾರಣಾಸಿ ಜಿಲ್ಲಾ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆಯಲಿದೆ. ಜೊತೆಗೆ ವಿಡಿಯೋ ಸರ್ವೆಯನ್ನು ಎರಡು ಪಕ್ಷಗಳಿಗೂ ಸಲ್ಲಿಕೆ ಮಾಡಲಾಗುತ್ತದೆ. ಇದು ಇಂದು ಮಹತ್ವ ಪಡೆದುಕೊಳ್ಳುತ್ತದೆ.
ನ್ಯಾ.ಅಜಯ್ ಕೃಷ್ಣ ವಿಶ್ವೇಶ ನೇತೃತ್ವದಲ್ಲಿ ಈ ವಿಚಾರಣೆ ನಡೆಯಲಿದೆ. ಜ್ಞಾನವಾಪಿ ಮಸೀದಿಯೊಳಗೆ ಸರ್ವೆ ಮಾಡಲು ಸೆಷನ್ ನ್ಯಾಯಾಲಯ ಬಿಗಿಭದ್ರತೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿತ್ತು. ಬಳಿಕ ಅಲ್ಲಿನ ಮಾಹಿತಿ ಸೋರಿಕೆಯಾಗಿತ್ತು. ಮಾಹಿತಿ ಸೋರಿಕೆಯಾಗದಂತೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಫೋಟೋ, ವಿಡಿಯೋ ಎಲ್ಲಿಯೂ ಲೀಕ್ ಆಗದಂತೆ ಸೂಚನೆ ನೀಡಿತ್ತು. ಇದೀಗ ಆ ವಿಡಿಯೋ, ಫೋಟೋಗಳನ್ನು ಎರಡು ಪಕ್ಷಗಳಿಗೆ ನೀಡಲಾಗುತ್ತದೆ.
ಫಾಸ್ಟ್ರಾಕ್ ಕೋರ್ಟ್ ನಲ್ಲಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಇಂದೇ ನಡೆಯಲಿದೆ. ಮಸೀದಿ ಒಳಗಿರುವ ಶೃಂಗಾರ ಗೌರಿ ಹಾಗೂ ಮಸೀದಿ ಆವರಣದಲ್ಲಿರುವ ದೇವತೆಗಳ ಆರಾಧನೆಗೆ ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ. ಇಂದು ಕೂಡ ಕೋರ್ಟ್ ಎರಡು ಕಡೆಯ ವಾದ ಪ್ರತಿವಾದ ಕೇಳಿಸಿಕೊಳ್ಳಲಿದೆ.