ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರಿಗೆ ಬೆಂಬಲ ನೀಡಿದ ಬಳಿಕ ಇದೀಗ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೂ ಮಹತ್ವದ ನೆರವು ಘೋಷಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2026-27ನೇ ಹಂಗಾಮಿಗೆ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (FRP)ಯನ್ನು ಪ್ರತಿ ಕ್ವಿಂಟಲ್ಗೆ ₹365ಕ್ಕೆ ನಿಗದಿ ಮಾಡಿದೆ. ಇದು ಶೇ.10.25 ರಿಕವರಿ ದರದ ಆಧಾರದ ಮೇಲೆ ನಿರ್ಧರಿಸಲಾಗಿದ್ದು, ಕರ್ನಾಟಕದ ಸುಮಾರು 8ರಿಂದ 10 ಲಕ್ಷ ರೈತರಿಗೆ ನೇರ ಲಾಭವಾಗಲಿದೆ.

ಇದಲ್ಲದೆ, ರಿಕವರಿ ಪ್ರಮಾಣದಲ್ಲಿ 0.1% ಏರಿಕೆಗೆ ಪ್ರತಿ ಕ್ವಿಂಟಲ್ಗೆ ₹3.56 ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತದೆ. ರಿಕವರಿ ಪ್ರಮಾಣ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಯಾವುದೇ ಕಡಿತವಿಲ್ಲದೆ ಕನಿಷ್ಠ ₹338.3 ಬೆಂಬಲ ಬೆಲೆ ನಿಗದಿಪಡಿಸಿರುವುದು ರೈತರಿಗೆ ಹೆಚ್ಚುವರಿ ಭರವಸೆ ನೀಡಿದೆ.ಈ ನಿರ್ಧಾರದಿಂದ ದೇಶದ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಕುಟುಂಬಗಳಿಗೆ ನೆರವಾಗಲಿದ್ದು, ಕರ್ನಾಟಕದಲ್ಲಿಯೂ ಲಕ್ಷಾಂತರ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಜೊತೆಗೆ ಸಕ್ಕರೆ ಕಾರ್ಖಾನೆಗಳು ಹಾಗೂ ಸಕ್ಕರೆ ಉದ್ಯಮದ 5 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಸಹ ಇದು ಲಾಭಕರವಾಗಲಿದೆ.

ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ, ಬಳ್ಳಾರಿ, ದಾವಣಗೆರೆ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳು ಕಬ್ಬು ಬೆಳೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಸುಮಾರು 16% ಇದೆ. ಹೀಗಾಗಿ ಈ ಬೆಲೆ ಏರಿಕೆ ರಾಜ್ಯದ ಕೃಷಿ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.













