ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ಕೊರತೆಯನ್ನು ನಿವಾರಿಸಿ, ಬೆಳೆಗಳ ಕಟಾವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ. 2026–27ನೇ ಸಾಲಿನ ‘ಹಾರ್ವೆಸ್ಟರ್ ಹಬ್ ಘಟಕ ಯೋಜನೆ’ ಅಡಿಯಲ್ಲಿ ರೈತರಿಗೆ ಹಾರ್ವೆಸ್ಟರ್ ಹಾಗೂ ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳ ಖರೀದಿಗೆ ಭಾರಿ ಸಬ್ಸಿಡಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಿಂದ ಸಣ್ಣ ಹಾಗೂ ಮಧ್ಯಮ ರೈತರು ಕಡಿಮೆ ವೆಚ್ಚದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಯೋಜನೆಯಡಿ ಕಬ್ಬು ಕಟಾವು ಯಂತ್ರ, ಸೈಲೇಜ್ ಕಟಾವು ಮತ್ತು ಸೈಲೇಜ್ ತಯಾರಿಕಾ ಯಂತ್ರ, ರಾಗಿ ಹಾಗೂ ಭತ್ತ ಕಟಾವು ಯಂತ್ರ ಸೇರಿದಂತೆ ವಿವಿಧ ಬೆಳೆಗಳಿಗೆ ಬಳಸುವ ಹಾರ್ವೆಸ್ಟರ್ಗಳನ್ನು ಖರೀದಿಸಬಹುದು.ಸಾಮಾನ್ಯ ವರ್ಗದ ರೈತರಿಗೆ ಯಂತ್ರದ ಒಟ್ಟು ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಠ ₹40 ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು, ರೈತ ಉತ್ಪಾದಕರ ಸಂಸ್ಥೆಗಳು (FPO), ನೋಂದಾಯಿತ ಕೃಷಿ ಸಂಘಗಳು ಹಾಗೂ ಸಹಕಾರಿ ಸಂಸ್ಥೆಗಳಿಗೆ ಶೇ.70ರಷ್ಟು ಕ್ರೆಡಿಟ್-ಲಿಂಕ್ಡ್ ಬ್ಯಾಕ್ಎಂಡೆಡ್ ಸಬ್ಸಿಡಿ ನೀಡಲಾಗುತ್ತದೆ.
ವೈಯಕ್ತಿಕ ರೈತರ ಜೊತೆಗೆ ರೈತ ಉತ್ಪಾದಕರ ಸಂಸ್ಥೆಗಳು, ಕೃಷಿ ಸಂಘಗಳು, ಸಹಕಾರಿ ಸಂಘಗಳು ಹಾಗೂ ಕೃಷಿ ಉದ್ಯಮಿಗಳೂ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಹಣಿ/ಆರ್ಟಿಸಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ಬುಕ್ ಹಾಗೂ ಸಕ್ರಿಯ ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ.ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 30, 2026 ಕೊನೆಯ ದಿನವಾಗಿದೆ. ಆಸಕ್ತ ರೈತರು ತಮ್ಮ ಜಿಲ್ಲೆಯ ಅಥವಾ ತಾಲೂಕಿನ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿದ್ದರೂ, ಆಯಾ ಜಿಲ್ಲೆಗಳಿಗೆ ಲಭ್ಯವಾಗುವ ಅನುದಾನದ ಆಧಾರದ ಮೇಲೆ ಅನುಷ್ಠಾನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ (JDA) ಕಚೇರಿಯನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








