ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 18 : ಅಂದು ಸ್ವಾತಂತ್ರ್ಯಕ್ಕಾಗಿ, ಇಂದು ಸಂಘಟನೆಗಾಗಿ ಗಣೇಶೋತ್ಸವ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಒಗ್ಗೂಡಿಸಿದ ಗಣೇಶೋತ್ಸವವು, ಇಂದು ಸಾಮಾಜಿಕ ಬದಲಾವಣೆ, ಧಾರ್ಮಿಕ ಸುಧಾರಣೆ, ರಾಜಕೀಯ ಶಕ್ತಿ, ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಬೆಳವಣಿಗೆಗೆ ಹಾದಿ ಮಾಡಿಕೊಡುವ ನಿಜವಾದ ಚಳವಳಿಯಾಗಬೇಕಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹುಲ್ಲೂರು, ಓಬೇನಹಳ್ಳಿ, ನಂದಿಪುರ, ಅನ್ನೇಹಾಳ, ಮಠದ ಕುರುಬರ ಹಟ್ಟಿ ವಿವಿಧ ಭೋವಿ ಕಾಲೋನಿಗಳ ಗಣೇಶೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ತಿರುವು ನೀಡಿದ್ದ ಸಾರ್ವಜನಿಕ ಗಣೇಶೋತ್ಸವ, ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಮಾಜವನ್ನು ಸಶಕ್ತಗೊಳಿಸುವ ಪ್ರಬಲ ಚಿಂತನ ಕೇಂದ್ರವಾಗಿ ಮಾರ್ಪಡಬೇಕಿದೆ.
ಲೋಕಮಾನ್ಯ ಬಾಲ ಗಂಗಾಧರ ತಿಲಕರು ಬ್ರಿಟಿಷ್ ಆಡಳಿತದ ವಿರುದ್ಧ ಜನರನ್ನು ಒಂದಗೂಡಿಸಲು ಮತ್ತು ರಾಷ್ಟ್ರೀಯ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ್ದರು. ಅಂದು ಧಾರ್ಮಿಕ ಚೌಕಟ್ಟಿನಲ್ಲಿ ಆರಂಭವಾದ ಈ ಚಳವಳಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಗಟ್ಟಿ ತಡಿಪಾಯ ಹಾಕಿಕೊಟ್ಟಿತ್ತು. ಆದರೆ, ಬದಲಾದ ಇಂದಿನ ಸಾಮಾಜಿಕ ಮತ್ತು ಆರ್ಥಿಕ ವಾತಾವರಣದಲ್ಲಿ ಈ ಉತ್ಸವವು ಕೇವಲ ಆಚರಣೆ ಅಥವಾ ಮನರಂಜನೆಗೆ ಸೀಮಿತವಾಗದೆ, ಸಮಗ್ರ ಸಮಾಜ ಸುಧಾರಣೆಯ ಶಕ್ತಿಯಾಗಿ ಬೆಳೆಯುವ ಅಗತ್ಯವಿದೆ.

ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಮುಖ್ಯವಾಹಿನಿಗೆ ತರಲು ಗಣೇಶೋತ್ಸವದ ವೇದಿಕೆಗಳು ಚಿಂತನ ಕೇಂದ್ರಗಳಾಗಿ ಕೆಲಸ ಮಾಡಬೇಕಿದೆ. ಸಾಮಾಜಿಕ ಶಕ್ತಿಯಾಗಿ ನಿಲ್ಲಲು ಯುವಕರು ಸಮುದಾಯ ಸಂಘಟನೆಗೆ ಆದ್ಯತೆಯನ್ನು ನೀಡಬೇಕು. ಯುವಜನತೆಗೆ ಉದ್ಯೋಗ ಮಾರ್ಗದರ್ಶನ ನೀಡುವುದರ ಮೂಲಕ ಆರ್ಥಿಕ ಸಬಲೀಕರಣಗೊಳ್ಳಬೇಕು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸುಧಾರಣೆ ಪ್ರಾಮುಖ್ಯತೆ ನೀಡಬೇಕು. ರಾಜಕೀಯ ಜಾಗೃತಿಗಾಗಿ ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಾಜದಲ್ಲಿ ಆರೋಗ್ಯಕರ ಚರ್ಚೆ ಹಾಗೂ ಜಾಗೃತಿ ಮೂಡಿಸುವ ತಾಣವಾಗಿ ಈ ವೇದಿಕೆಗಳನ್ನು ಬಳಸಬೇಕು ಎಂದರು.
ಶ್ರೀಗಳೊಂದಿಗೆ ಸಮುದಾಯದ ಮುಖಂಡರಾದ ಮಠದ ಕುರುಬರಹಟ್ಟಿ, ಹೆಚ್ ಆನಂದಪ್ಪ, ವೀರೇಶ, ವಿಶ್ವನಾಥ, ರುದ್ರಪ್ಪ, ಅನ್ನೇಹಾಳ ಆನಂದ, ದುಗ್ಗಪ್ಪ, ಹನುಮಂತಪ್ಪ, ಷಣ್ಮೂಖಪ್ಪ, ನಂದಿಪುರದ ಯಲ್ಲಪ್ಪ, ವೀರೇಶ, ಓಬೇನಹಳ್ಳಿ ಓಬಳೇಶ, ಲಕ್ಷ್ಮಣ, ರಾಮು, ಹುಲ್ಲೂರಿನ ಆದಿ ಉಪಸ್ಥಿತಿಯಿದ್ದರು










