ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ ಎನ್ನುವುದಾದರೆ ದೆಹಲಿಯ ಜಂತರ್-ಮಂತರ್ನಲ್ಲಿ ಸಾವಿರಾರು ಯುವಕ/ಯುವತಿಯರು ನಡೆಸಿದ ಹೋರಾಟವೇ ಜೀವಂತ ಸಾಕ್ಷಿ ಎಂದು ಅಲೆಮಾರಿ ಅರೆಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಎಎಫ್ವೈ. ವಿದ್ಯಾರ್ಥಿ ವಿಭಾಗ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿ. ಸದೃಢ ದೇಹ, ಆರೋಗ್ಯಕರ ಮನಸ್ಸಿರಬೇಕಾದರೆ ಶಿಕ್ಷಣ ಮುಖ್ಯ. ಅಭಿವೃದ್ದಿಯತ್ತ ಮುಂದುವರೆಯುತ್ತಿರುವ ಭಾರತದಲ್ಲಿ ಬಡವರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವ ಹೊಣೆ ಆಳುವ ಸರ್ಕಾರಗಳ ಮೇಲಿದೆ. ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ನೀಡಬೇಕು. ಮಾನವ ಸಂಪನ್ಮೂಲವೇ ನಿಜವಾದ ದೇಶದ ಸಂಪತ್ತು ಎನ್ನುವುದನ್ನು ಸರ್ಕಾರಗಳು ಅರಿತುಕೊಳ್ಳಬೇಕು. ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣ ಮಕ್ಕಳಿಗೆ ಮುಖ್ಯ. ಸ್ವಾಮಿ ವಿವೇಕಾನಂದ,
ಅಬ್ದುಲ್ಕಲಾಂ ಹಾಗೂ ದೇಶಭಕ್ತರನ್ನು ಇಂದಿನ ಯುವ ಸಮೂಹ ಆದರ್ಶವಾಗಿಟ್ಟುಕೊಳ್ಳಬೇಕು. ಜ್ಞಾನಕ್ಕಿಂತ ಅಂಕಗಳಿಗೆ ಪ್ರಾಮುಖ್ಯತೆಯಿದೆ. ಅಧಿಕಾರಿಗಳ ಹಾಗೂ ರಾಜಕಾರಣಿಗಳ ಭ್ರಷ್ಟಾಚಾರವನ್ನು ಪ್ರಶ್ನಿಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಅನೇಕ ಧರ್ಮ, ಜಾತಿಗಳಿಂದ ಕೂಡಿರುವ ದೇಶದ ನಮ್ಮದು. ಎಲ್ಲರೂ ಪ್ರೀತಿ, ಸಹಬಾಳ್ವೆ, ಸಹೋದರತೆಯಿಂದ ಬದುಕಿದಾಗ ಮಾತ್ರ ಶಾಂತಿ ನೆಲಸುತ್ತದೆ ಎಂದರು.
ನೇರ್ಲಗಿ ಫೌಂಡೇಶನ್ನ ಮಮತ ನೇರ್ಲಗಿ ಮಾತನಾಡಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಜಂತರ್-ಮಂತರ್ನಲ್ಲಿ ಸಹಸ್ರಾರು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಮಣಿದು ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ವಿದ್ಯಾರ್ಥಿಗಳ ಕೂಗು ದೇಶಕ್ಕೆ ಮುಖ್ಯ. ಮಕ್ಕಳನ್ನು ಶಾಲೆ ಪಠ್ಯ ಪುಸ್ತಕಕ್ಕಷ್ಟೆ ಸೀಮಿತಗೊಳಿಸಬಾರದು. ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಲು ಗುರು-ಹಿರಿಯರು, ಪೋಷರುಗಳು ಉತ್ತೇಜಿಸಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೂ ಅನೇಕ ಸಮಸ್ಯೆಗಳಿವೆ. ಎಲ್ಲವನ್ನು ದಾಟಿ ಉತ್ತಮ ಶಿಕ್ಷಣವಂತರಾದಾಗ ಮಾತ್ರ ಜೀವನಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಎಎಫ್ವೈ. ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಪ್ರದೀಪ್ಕುಮಾರ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಎ.ಸಾಧಿಕ್ವುಲ್ಲಾ, ಭಾರತಿ, ಸಂತೋಷಮ್ಮ, ಜಿ.ವಿ.ಟಿ.ವಿ.ಯ ರಘು ಇವರುಗಳು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಿಸಲಾಯಿತು.











