ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 12 : ಇನ್ನು ಮುಂದೆ ನಮ್ಮ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಿಕೊಳ್ಳುವುದಿಲ್ಲ. ಬದಲಾಗಿ ಮಠದ ವಾರ್ಷಿಕೋತ್ಸವ ಆಚರಿಸುತ್ತೇವೆ. ಇದಕ್ಕೆ ಭಕ್ತರು ಸಹಕಾರ ನೀಡಬೇಕು ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮನವಿ ಮಾಡಿದರು.
ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಮಾದಿಗ ನೌಕರರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಈವರೆಗೆ ನಮ್ಮ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಇನ್ನುಮುಂದೆ ಜನ್ಮದಿನಾಚರಣೆ ಬೇಡ ಮಠದ ವಾರ್ಷಿಕೋತ್ಸವ ಮಾತ್ರ ಆಚರಿಸೋಣ ಎಂದು ತಿಳಿಸಿ ನಾವು ಮಠದ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕವಾಗಿ 24 ವರ್ಷಗಳಾಗಿದೆ. ಮುಂದಿನ ವರ್ಷ 25 ನೇ ವರ್ಷ ಆಗಲಿದ್ಸು, ಎಲ್ಲರ ಜೊತೆ ಚರ್ಚೆ ನಡೆಸಿ 25ನೇ ವರ್ಷದ ಪಟ್ಟಾಭಿಷೇಕ ಬೆಳ್ಳಿ ಮಹೋತ್ಸವ ಆಚರಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು.
ಸಮಾಜದ ದೃಷ್ಟಿಕೋನದಿಂದ ಮಾತನಾಡಿದ್ದಾಗ, ಕೆಲವೊಮ್ಮೆ ಅದನ್ನು ಅರ್ದಕ್ಕೆ ಕಟ್ ಮಾಡಿ, ತಿರುಚಿ ತಪ್ಪು ಸಂದೇಶ ಬರುವಂತೆ ವೈರಲ್ ಮಾಡಲಾಗುತ್ತದೆ. ಸೂಕ್ಷ್ಮ ಸಂದರ್ಭ ಇರುವುದರಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಸಮುದಾಯದ ನಾಯಕರಿಗೆ ಸಲಹೆ ನೀಡಿ ಮೀಸಲಾತಿ ಇರುವ ಕಡೆಗಳಲ್ಲಿ ನಮ್ಮವರು ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ನಾಯಕರು ಗಮನಹರಿಸಬೇಕು. ಬಿ.ಎನ್.ಚಂದ್ರಪ್ಪ, ನಾರಾಯಣಸ್ವಾಮಿ, ಗೊವಿಂದ ಕಾರಜೋಳ ಅವರು ದೆಹಲಿಯಲ್ಲಿ ನಮ್ಮ ಸಮುದಾಯದ ಪ್ರಾತಿನಿಧ್ಯ ಉಳಿಸಿದ್ದಾರೆ. ಯಾವುದೇ ಪಕ್ಷದಲ್ಲಿದ್ದರೂ ನಮ್ಮವರು ಎನ್ನುವ ಭಾವನೆ ಇರಲಿ. ಭಿನ್ನಾಭಿಪ್ರಾಯ ಇದ್ದರೆ ಒಳಗೆ ಕುಳಿತು ಬಗೆಹರಿಸಿಕೊಳ್ಳಿ ಎಂದು ಹೇಳಿ ಹಿಂದೆ ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ, ಬದುಕುವುದೇ ಕಷ್ಟ ಎನ್ನುವ ಕಾಲದಲ್ಲಿ ಸಾಧನೆ ಮಾಡಿದ್ದಾರೆ. ಈಗ ಸಾಕಷ್ಟು ಸೌಲಭ್ಯ ಇವೆ. ಹಾಸ್ಟೆಲ್ ಸೌಲಭ್ಯ ಇವೆ. ಅದನ್ನು ಬಳಸಿಕೊಂಡು ಚೆನ್ನಾಗಿ ಬೆಳೆಯಬೇಕು ಎಂದರು.
ಸತತ 35 ವರ್ಷಗಳ ಕಾಲ ಸಂಸದರಾಗಿ, ಸಚಿವರಾಗಿ ಕೆಲಸ ಮಾಡಿರುವ ನಮ್ಮ ಸಮುದಾಯದ ನಾಯಕ ಕೆ.ಎಚ್.ಮುನಿಯಪ್ಪ ಅವರಿಗೆ ಕೊಟ್ಟಿರುವ ಖಾತೆ ಬಗ್ಗೆ ಬಹಳ ನೋವಿದೆ ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿ. ಈ ಹಿಂದೆ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿ ಅವರಿಗೆ ಹೆಚ್ಚುವರಿಯಾಗಿ ಈ ಖಾತೆ ನೀಡಲಾಗಿತ್ತು. ಅಂತಹ ಖಾತೆಯನ್ನು ಮುನಿಯಪ್ಪ ಅವರಿಗೆ ಕೊಡಲಾಗಿದೆ.ಆದಷ್ಟು ಬೇಗ ಈ ಖಾತೆ ಬದಲಾವಣೆ ಮಾಡಿ ಸಮುದಾಯದ ನೋವು ಶಮನ ಮಾಡಬೇಕು ಎಂದರು.
ಡಿ.ಕೆ.ಶಿವಕುಮಾರ್ ಯುವ, ಉತ್ಸಾಹಿ ಮುಖ್ಯಮಂತ್ರಿಯಗಿದ್ದಾರೆ. ನಮ್ಮ ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರನ್ನು ಮುಂದೆ ಆಹ್ವಾನಿಸಿ ಗೌರವಿಸಿ ಸಮುದಾಯದ ಸಮಸ್ಯೆಗಳನ್ನು ತಿಳಿಸೋಣ ಎಂದು ಹೇಳಿದರು.ಒಳಮೀಸಲಾತಿ ಜಾತಿಯಿಂದಾಗಿ ಮಕ್ಕಳು ಈ ಹಿಂದಿನಂತೆ 101 ಜಾತಿಗಳ ಜೊತೆಗೆ ಪೈಪೋಟಿ ನಡೆಸುವಂತಿಲ್ಲ. ಈಗ 18-20 ಜಾತಿಗಳ ಜೊತೆಗೆ ಮಾತ್ರ ಪೈಪೋಟಿ ಮಾಡಬಹುದು. ಉತ್ತಮ ಅಂಕ ಗಳಿಕೆ ಕಡೆಗೆ ಗಮನಹರಿಸಬೇಕು. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.







