ಸುದ್ದಿಒನ್, ಚಿತ್ರದುರ್ಗ, ಮಾ.25: ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾರ್ಚ್ 26 ಹಾಗೂ 27 ರಂದು ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಮಾರ್ಚ್ 26ರಂದು ಬೆಳಿಗ್ಗೆ 10ಕ್ಕೆ ಜ್ಞಾನಗಂಗೋತ್ರಿ ಆವರಣದಲ್ಲಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಜಿ. ಪಿ. ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಎಸ್. ಪಿ. ಉಪಸ್ಥಿತರಿರುವರು. ಸಿಎಂಸಿಆರ್ಐ ನಿರ್ದೇಶಕ ಡಾ. ಯುವರಾಜ್ ಬಿ. ವೈ. ಅಧ್ಯಕ್ಷತೆ ವಹಿಸುವರು. ಸಮುದಾಯ ವೈದ್ಯಕೀಯ ವಿಭಾಗದ ಡಾ. ಅಶ್ವಿನಿ ಎಲ್. ಎಚ್. ಅವರು ಶಿಬಿರದ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಾರ್ಚ್ 26ರಂದು ಪ್ರಥಮ ವರ್ಷದ ಹಾಗೂ ಮಾರ್ಚ್ 27ರಂದು ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಸಂಪೂರ್ಣ ರಕ್ತ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, ಲಿವರ್ ಮತ್ತು ಕಿಡ್ನಿ ಕಾರ್ಯಕ್ಷಮತೆ ಪರೀಕ್ಷೆ, ಥೈರಾಯ್ಡ್ ಪೆÇ್ರಫೈಲ್ ಹಾಗೂ ವಿಟಮಿನ್ ಡಿ ಮತ್ತು ಬಿ12 ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು.

ಇದರೊಂದಿಗೆ ಸಾಮಾನ್ಯ ಔಷಧ ವಿಭಾಗ, ನೇತ್ರ ವಿಭಾಗ, ಇಎನ್ಟಿ (ಕಿವಿ, ಮೂಗು, ಗಂಟಲು), ಸ್ತ್ರೀರೋಗ ಹಾಗೂ ಚರ್ಮರೋಗ ತಜ್ಞರಿಂದ ಉಚಿತ ಸಮಾಲೋಚನೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.














