ಬೆಂಗಳೂರು: ಇಡ್ಲಿ ಗುರು ಎಂಬ ಹೆಸರು ಇತ್ತಿಚೆಗೆ ಸಿಕ್ಕಾಪಟ್ಟೆ ಚಾಲ್ತಿಯಲ್ಲಿ ಇದೆ. ಆ ಹೆಸರೇ ಇಡ್ಲಿ ಪ್ರಿಯರನ್ನು ಆಕರ್ಷಣೆ ಮಾಡುತ್ತದೆ. ಈ ಇಡ್ಲಿ ಗುರು ಹೆಸರಿನಿಂದ ಪುಟ್ಟದೊಂದು ಹೊಟೇಲ್ ಶುರು ಮಾಡಿ, ಬ್ರಾಂಡ್ ಆಗಿ ಬೆಳೆಸಿದವರು ಕಾರ್ತಿಕ್ ಶೆಟ್ಟಿ ಹಾಗೂ ಮಂಜುಳಾ. ಇದೀಗ ಮೋಸ ಮಾಡಿದ ಆರೋಪದ ಮೇಲೆ ಕಾರ್ತಿಕ್ ಶೆಟ್ಟಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಮ್ಮೆ ಯಾವುದಾದರೂ ಬ್ರ್ಯಾಂಡ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದರೆ, ಅದರ ಪ್ರಾಂಚೈಸಿಗಳು ಸಾಕಷ್ಟು ಹುಟ್ಟಿಕೊಳ್ಳುತ್ತಿವೆ. ಅದೇ ಥರ ಪ್ರಾಂಚೈಸಿ ವಿಚಾರದಲ್ಲಿಯೇ ಕಾರ್ತಿಕ್ ಶೆಟ್ಟಿ ದೋಖಾ ಮಾಡಿದ್ದಾರೆಂದು ಆರೋಪಿಸಿ, ದೂರು ನೀಡಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಹಾಗೂ ಮಂಜುಳಾ ಮೇಲೆ ದೂರು ದಾಖಲಾಗಿದೆ. ಈ ದೂರಿನ ಆಧಾರದ ಮೇಲೆ ಕಾರ್ತಿಕ್ ಶೆಟ್ಟಿ ಅವರನ್ನು ಮುಂಬೈನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚೇತನ್ ಎಂಬುವವರು ಈ ದೂರು ನೀಡಿದ್ದಾರೆ. ಕಾರ್ತಿಕ್ ಶೆಟ್ಟಿ ಅಂಡ್ ಗ್ಯಾಂಗ್, ನನ್ನ ಬಳಿ ಮೂರು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದೆ. ಫುಡ್ ಕಾರ್ಟ್ ತಂದು ನಿಲ್ಲಿಸಿ, ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ, ಬೇರೆಡೆ ವ್ಯಾಪಾರ ಮಾಡೋಣಾ ಅಂತ ಶಿಫ್ಟ್ ಮಾಡಿದರು. ಕಮಿಷನ್ ನೀಡುವುದಾಗಿ ಹೇಳಿ, ಯಾವುದೇ ಕಮಿಷನ್ ಸಹ ನೀಡಿಲ್ಲ. ಅಂಗಡಿಗಾಗಿ ಖರ್ಚಾದ ಹಣವನ್ನು ಸಹ ನೀಡಿಲ್ಲ. ಆರೋಪಿಗಳನ್ನು ಭೇಟಿಯಾದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಚೇತನ್ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲು ಎಫ್ಐಆರ್ ದಾಖಲಾಗುತ್ತಿದ್ದಂತೆ ಕಾರ್ತಿಕ್ ಅಂಡ್ ಗ್ಯಾಂಗ್ ತಲೆಮರೆಸಿಕೊಂಡಿತ್ತು. ಇದೀಗ ಪೊಲೀಸರು ಕಾರ್ತಿಕ್ ಶೆಟ್ಟಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.