Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಮಾಜಿ ರಣಜಿ ಆಟಗಾರ ಅಕ್ಷಯ್ ಎಸ್.ಎಲ್ ನಿಧನ

---Advertisement---

ಸುದ್ದಿಒನ್,ಬೆಂಗಳೂರು,ಮೇ.25 :ಬೆಂಗಳೂರಿನಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ತೀವ್ರ ದುರಂತ ಸಂಭವಿಸಿದೆ. ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಕರ್ನಾಟಕದ ಮಾಜಿ ರಣಜಿ ಆಟಗಾರ ಎಸ್.ಎಲ್ ಅಕ್ಷಯ್ (39) ಅವರು ಕೊನೆಯುಸಿರೆಳೆದಿದ್ದಾರೆ. ಕ್ರೀಡಾಲೋಕವನ್ನು ದಿಗ್ಭ್ರಮೆಗೊಳಿಸಿರುವ ಈ ಘಟನೆ ಬೆಂಗಳೂರಿನ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ ನಡೆದಿದೆ.

ಮೈದಾನದಲ್ಲೇ ಏನಾಯ್ತು? ಘಟನೆಯ ವಿವರ:

ಬೆಂಗಳೂರಿನ ಎಸ್ಎಲ್ಎಸ್ ಮೈದಾನದಲ್ಲಿ ಭಾನುವಾರ (ಮೇ 24) ಸಫೀಯರ್ ಕ್ರಿಕೆಟ್ ಕ್ಲಬ್ ಹಾಗೂ ಭಾರತ್ ಕ್ರಿಕೆಟ್ ಕ್ಲಬ್ ನಡುವೆ ಕೆಎಸ್ಸಿಎ ಥರ್ಡ್ ಡಿವಿಷನ್ ಪಂದ್ಯ ಆಯೋಜನೆಗೊಂಡಿತ್ತು. ಸಫೀಯರ್ ತಂಡದ ಪರ ಕಣಕ್ಕಿಳಿದಿದ್ದ ಶಿವಮೊಗ್ಗ ಮೂಲದ ವೇಗಿ ಅಕ್ಷಯ್, ಆರಂಭದಲ್ಲಿ ಕರಾರುವಕ್ಕಾಗಿ 4 ಓವರ್ಗಳ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಿದ್ದರು. ತದನಂತರ ಸ್ಲಿಪ್ ಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರಿಗೆ ತೀವ್ರ ಆಯಾಸ ಕಾಣಿಸಿಕೊಂಡಿದೆ.

ಕೂಡಲೇ ಮೈದಾನದಿಂದ ಹೊರನಡೆದ ಅಕ್ಷಯ್, ವಿಶ್ರಾಂತಿ ಕೊಠಡಿಯಲ್ಲಿ ಬಾಳೆಹಣ್ಣು ಸೇವಿಸಿ ರಿಲ್ಯಾಕ್ಸ್ ಆಗಲು ಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಮೃತ ಅಕ್ಷಯ್ ಅವರು ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಪರಿಚಿತ ಹೆಸರಾಗಿದ್ದರು. ರಾಜ್ಯ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಇವರು, ತಮ್ಮ ಅತ್ಯುತ್ತಮ ಬೌಲಿಂಗ್ ಶೈಲಿಯಿಂದ ಗಮನ ಸೆಳೆದಿದ್ದರು. ರಣಜಿ ಟ್ರೋಫಿ ಮಾತ್ರವಲ್ಲದೆ, ಕರ್ನಾಟಕ ಪ್ರೀಮಿಯರ್ ಲೀಗ್ (KPL) ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಕರ್ನಾಟಕದ ಪರ 6 ಪ್ರಥಮ ದರ್ಜೆ ಪಂದ್ಯಗಳು, 3 ಲಿಸ್ಟ್ ‘ಎ’ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ಪ್ರತಿಭಾನ್ವಿತ ಕ್ರಿಕೆಟರ್ ಆಗಿದ್ದರು. ಕೇವಲ 39ನೇ ವಯಸ್ಸಿಗೆ ಮೈದಾನದಲ್ಲೇ ಯುವ ಕ್ರಿಕೆಟರ್ ಅಕ್ಷಯ್ ಅವರ ಜೀವ ಪಕ್ಷಿ ಹಾರಿಹೋಗಿರುವುದು ರಾಜ್ಯ ಕ್ರೀಡಾಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

Join WhatsApp

Join Now

Join Telegram

Join Now