ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 21 : ಸೃದೃಢ ಆರೋಗ್ಯಕ್ಕಾಗಿ ಶುಚಿ, ರುಚಿಯಾದ ಆಹಾರ ಬಹಳ ಮುಖ್ಯ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಆಹಾರ ಮೇಳ ಹಾಗೂ ಬಸವೇಶ್ವರ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕವರಿಂದ ಹಿಡಿದು ದೊಡ್ಡವರತನಕ ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು. ಶರಣರು ಆಹಾರವನ್ನು ಪ್ರಸಾದವೆಂದು ಕರೆಯುತ್ತಾರೆ. ಮನಸ್ಸು ಮತ್ತು ದೇಹಕ್ಕೆ ಪ್ರಸನ್ನತೆ ಕೊಡುವುದೇ ಪ್ರಸಾದ. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಯಾವುದರಲ್ಲೂ ಕಮ್ಮಿಯಿಲ್ಲ. ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ರವರು ಬಹಳ ವರ್ಷಗಳ ಕಾಲ ಮುರುಘಾಮಠದಲ್ಲಿಯೂ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರಿಗೆ ಶಿಕ್ಷಣ ಸಂಸ್ಥೆಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕೆಂಬ ಬುದ್ದಿವಂತಿಕೆಯಿದೆ ಎಂದು ಹೇಳಿದರು.
ಡಾ.ರಾಜೇಶ್ ಮಾತನಾಡಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶೇ. 25 ರಷ್ಟು ರಿಯಾಯಿತಿಯಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಚಿಕ್ಕಂದಿನಲ್ಲಿಯೇ ಮಕ್ಕಳು ಆಹಾರ ಮೇಳ ನಡೆಸುವುದರಿಂದ ಶಿಕ್ಷಣದ ಜೊತೆ ವ್ಯವಹಾರಿಕ ಜ್ಞಾನ ಮೂಡಿಸಿದಂತಾಗುತ್ತದೆ ಎಂದರು.
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೆ.ಎಂ.ಚೇತನ್ ಮಾತನಾಡುತ್ತ ಹಣ, ಆಸ್ತಿ, ಅಂತಸ್ತನ್ನು ಗಳಿಸಬಹುದು. ಆದರೆ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಕಷ್ಟ. ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮುಖ್ಯ. ಪರಿಸರ ಕಲುಷಿತಗೊಂಡಿರುವುದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಕಾಳಜಿ ವಹಿಸಬೇಕಾಗಿದೆ. ಮಕ್ಕಳಲ್ಲಿ ಮಾರುಕಟ್ಟೆ, ವ್ಯವಹಾರದ ಬಗ್ಗೆ ಅರಿವು ಮೂಡಿಸುವುದು ಆಹಾರ ಮೇಳದ ಉದ್ದೇಶ ಎಂದು ನುಡಿದರು.
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಬಿ.ಇಡಿ.ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯರಾದ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ಝಮಾಟೋದ ಮಂಜುನಾಥ್ ಇವರುಗಳು ವೇದಿಕೆಯಲ್ಲಿದ್ದರು.
ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಮಕ್ಕಳು ಆಹಾರ ಮೇಳದಲ್ಲಿ ಭಾಗವಹಿಸಿದ್ದರು. ವೈದ್ಯರುಗಳಾದ ಸುಹಾಸ್, ನಿರಂಜನ್, ಸೌಂದರ್ಯ, ರೂಪ ಇನ್ನು ಅನೇಕರು ಉಚಿತ ಆರೋಗ್ಯ ತಪಾಸಣೆಯಲ್ಲಿದ್ದರು. ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಮಕ್ಕಳು ವಿವಿಧ ಬಗೆಯ ತಿಂಡಿ ತಿನಿಸು, ಸಿಹಿ ಪದಾರ್ಥ, ಹೋಳಿಗೆ, ಚಪಾತಿ, ಪಾನಿ ಪೂರಿ, ಪಲಾವ್, ಕರಿದ ತಿಂಡಿಗಳನ್ನು ತಾವೆ ತಯಾರಿಸಿ ಆಹಾರ ಮೇಳದಲ್ಲಿ ಪ್ರದರ್ಶಿಸಿದರು.




