ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 23 : ರೈತ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಅನ್ನದಾತರಿಗೆ ಅಗತ್ಯ ಕೃಷಿ ತಾಂತ್ರಿಕ ಮಾಹಿತಿ ಹಾಗೂ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು..
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ಕೃಷಿಕರ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆ ಹಾಗೂ ‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಕಟ್ಟಕಡೆಯ ರೈತನಿಗೂ ತಲುಪುವಂತಾಗಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಾಂತ್ರಿಕ ನೆಪವೊಡ್ಡಿ ಯೋಜನೆಗಳನ್ನು ಸ್ಥಗಿತಗೊಳಿಸಬಾರದು ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದಾಗ ವಿಳಂಬ ಮಾಡದೆ ವರದಿ ಸಲ್ಲಿಸಿ, ರೈತರಿಗೆ ಪರಿಹಾರ ಒದಗಿಸಲು ಶ್ರಮಿಸಬೇಕು ಎಂದು ತಾಕೀತು ಮಾಡಿದರು. ರೈತರು ಕೂಡ ಸಾಂಪ್ರದಾಯಿಕ ಪದ್ಧತಿಯ ಜೊತೆಗೆ ಮಣ್ಣು ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂಬೈಗೆ ದಾಳಿಂಬೆ ರಫ್ತು:
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದರು. ತಾಲ್ಲೂಕಿನ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಲು ಮುಂಬೈನ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರಕ್ಕೆ ಎರಡು ಕಂಟೈನರ್ (ಸುಮಾರು 58 ಟನ್) ದಾಳಿಂಬೆ ಖರೀದಿಸಲು ಕಂಪನಿಗಳು ಒಪ್ಪಿದ್ದು, ಮುಂದಿನ ದಿನಗಳಲ್ಲಿ ದಿನಕ್ಕೆ 1 ರಿಂದ 2 ಕಂಟೈನರ್ ಬೇಡಿಕೆ ಪೂರೈಸಲು ವ್ಯವಸ್ಥಿತ ಮಾರುಕಟ್ಟೆ ಜಾಲ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಮೆ ಪರಿಹಾರ ಜಮೆ:
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಶೇ.75ರಷ್ಟು ಬಿತ್ತನೆ ವಿಫಲವಾಗಿದ್ದು, ನಿಯಮಾನುಸಾರ ಶೇ.25ರಷ್ಟು ಬೆಳೆ ವಿಮೆ ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದ್ದ ಮಧ್ಯಂತರ ಬೆಳೆ ನಷ್ಟ ಪರಿಹಾರದ ಪ್ರಸ್ತಾವನೆಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಜೆಡಿ
ಡಾ ಮಂಜುನಾಥ್ ಭರವಸೆ ನೀಡಿದರು.
ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆಗದ ಬದಲಾವಣೆಯನ್ನು ಶಾಸಕ ರಘುಮೂರ್ತಿ ಅವರ ದೂರದೃಷ್ಟಿಯಿಂದ ಕಾಣುತ್ತಿದ್ದೇವೆ. ವೇದಾವತಿ ನದಿ ಪಾತ್ರದಲ್ಲಿ ಚೆಕ್ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಿರುವುದು ಅವರ ಸಾಧನೆ. ಅವರು ಈ ತಾಲೂಕಿನ ‘ಚೌಧರಿ ಚರಣ್ ಸಿಂಗ್’ ಇದ್ದಂತೆ,ಎಂದು ಬಣ್ಣಿಸಿದರು.
ಇನ್ನು ರೈತ ಮುಖಂಡ ಚಿಕ್ಕಣ್ಣ ಮಾತನಾಡಿ, ಅತಿವೃಷ್ಟಿ ನಷ್ಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದರು. ನಬಾರ್ಡ್ ಯೋಜನೆಯಡಿ ಗೊಂಬೆರಹಳ್ಳಿ, ಪರಶುರಾಂಪುರ ಭಾಗಗಳಲ್ಲಿ ಏತ ನೀರಾವರಿ ಘಟಕ ಸ್ಥಾಪಿಸಲು ಶಾಸಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ಸಾಧಕ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಕೃಷಿ ವಿಜ್ಞಾನಿ ಡಾ.ಒಂಕಾರಪ್ಪ,ಕಿಸಾನ್ ಸಂಘದ ತಿಪ್ಪೇಸ್ವಾಮಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ , ಜಿಲ್ಲಾ ನಾಮನಿರ್ದೇಶಿತ ಸದಸ್ಯ ರಂಗಸ್ವಾಮಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ವಿಶ್ವನಾಥ್, ಕೆಡಿಪಿ ಸದಸ್ಯ ರಮೇಶ್, ಬಸವರಾಜ್, ರೈತ ಸಂಘದ , ನಾಗರಾಜ್, ಡಾ. ಶಿವಲಿಂಗಪ್ಪ, ಡಾ.ಆರ್ ಎ.ದಯಾನಂದಮೂರ್ತಿ. ಕೃಷಿ ಡಿಡಿ ಉಮೇಶ್ ಸಹಾಯಕ ಕೃಷಿ ಅಧಿಕಾರಿ ಎಸ್ಹಾ ಟಿ.ರಮೇಶ, ತೋಟಗಾರಿಕೆ ಹಿ.ಸಹಾಯಕ ನಿರ್ದೇಶಕ ಕುಮಾರ್,ಪಶುಸಂಗೋಪನ ಅಧಿಕಾರಿ ಶ್ರೀನಿವಾಸ್ ಬಾಬು ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.





