ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 10 : ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ರಕ್ತದ ಅವಶ್ಯಕತೆಯಿರುವುದರಿಂದ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡುವುದು ಒಳ್ಳೆಯದು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಹೇಳಿದರು.
ಭೂಮಿ ಗೀತಾ ಪ್ರಾಪರ್ಟಿಸ್, ಶಾಸಕ ಟಿ.ರಘುಮೂರ್ತಿ ಯುವ ಸೇನೆ, ಅಹೋಬಲ ಟಿ.ವಿ.ಎಸ್. ಕರುನಾಡ ವಿಜಯಸೇನೆ ಸಹಯೋಗದೊಂದಿಗೆ ಶಾಸಕ ಟಿ.ರಘುಮೂರ್ತಿರವರ ಜನ್ಮದಿನದ ಪ್ರಯುಕ್ತ ಡಿ.ಸಿ.ಸರ್ಕಲ್ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಿಕೊಳ್ಳುವ ಬದಲು ಇಂತಹ ಸಮಾಜ ಮುಖಿ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ರಕ್ತದಾನ ಮಾಡಿದರೆ ನಿಶ್ಯಕ್ತಿಯಾಗುತ್ತದೆಂಬ ತಪ್ಪು ಕಲ್ಪನೆ ಸರಿಯಲ್ಲ. ರಕ್ತದಾನ ಮಾಡಿದರೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಪ್ರಾಣ ಉಳಿಸಿದಂತಾಗುತ್ತದೆಂದು ತಿಳಿಸಿದರು.
ಜಾತಿ ಧರ್ಮಕ್ಕಿಂತ ರಕ್ತ ಶ್ರೇಷ್ಟವಾದುದು. ಅಭಿವೃದ್ದಿಯ ಹರಿಕಾರ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರಿಗೆ ಸರ್ಕಾರದಲ್ಲಿ ಇನ್ನು ಉನ್ನತ ಸ್ಥಾನಮಾನ ಸಿಗಲಿ ಎಂದು ಶುಭ ಹಾರೈಸಿದರು. ಮೆಡಿಕಲ್ ಕಾಲೇಜಿನ ಡೀನ್ ಯುವರಾಜ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಬಡವರಿಗೆ ರಕ್ತದ ಅವಶ್ಯಕತೆಯಿರುತ್ತದೆ, ಅಪಘಾತ, ಹೆರಿಗೆ, ತುರ್ತು ಸಂದರ್ಭಗಳಲ್ಲಿ ರಕ್ತ ಬೇಕು. ರಕ್ತದಾನ ಶಿಬಿರಗಳನ್ನು ನಡೆಸುವವರು ನಮ್ಮ ಗಮನಕ್ಕೆ ತಂದರೆ ಅಗತ್ಯ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಭೂಮಿ ಗೀತಾ ಪ್ರಾಪರ್ಟಿಸ್ನ ಗೀತ ಜಿ, ವಿಜಯ ಟಿ, ಸಂತೋಷ್ಕುಮಾರ್ ಟಿ. ಇವರುಗಳು ವೇದಿಕೆಯಲ್ಲಿದ್ದರು.












