ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಆಧುನಿಕ ಭಾರತ ನಿರ್ಮಾಣದ ಹರಿಕಾರ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ‘ಇಂಜಿನಿಯರ್ಸ್ ಡೇ’ ಅಂಗವಾಗಿ ನಾಡಿನ ಅಭಿಯಂತರರ ಜನಪರ ಸೇವೆಯನ್ನು ಸ್ಮರಿಸುತ್ತಾ. ಚಿತ್ರದುರ್ಗದ ಗೋನೂರು ಭಾಗಕ್ಕೆ ಹಲವು ತಾಂತ್ರಿಕ ಅಡೆತಡೆಗಳನ್ನು ಮೆಟ್ಟಿ ನಿಂತು ಭದ್ರಾ ಮೇಲ್ದಂಡೆ ನೀರು ಹರಿಸುವಲ್ಲಿ ಯಶಸ್ವಿಯಾದ ಎಂಜಿನಿಯರ್ಗಳ ಅವಿರತ ಶ್ರಮಕ್ಕೆ ಗೌರವ ಸಲ್ಲಿಸಲು ಸಾಹಿತಿ ಸುರೇಶ ಗುಪ್ತ ಅವರು ಅಭಿಯಂತರರ ಕೌಶಲ ಹಾಗೂ ಜನಮಾನಸದಲ್ಲಿ ಮೂಡಿದ ಹಸಿರಿನ ಸಂಭ್ರಮವನ್ನು ಬಿಂಬಿಸುವ ತಮ್ಮ 945ನೇ ಮುಕ್ತಕವನ್ನು ನಾಡಿನ ಸಮಸ್ತ ಇಂಜಿನಿಯರ್ಗಳಿಗೆ ಕೃತಜ್ಞತಾಪೂರ್ವಕವಾಗಿ ಸಮರ್ಪಿಸಿದ್ದಾರೆ.
ಇಂಜಿನಿಯರ್ಸ್ ಡೇ : ಸುರೇಶ ಗುಪ್ತ ಅವರ ಕವನದ ನಮನ
ಜಗತ್ತು ಕಂಡ ಅಪ್ರತಿಮ ಇಂಜಿನಿಯರ್ ಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯರವರು ಅಗ್ರಮಾನ್ಯರು. ಅವರು ಭಾರತೀಯರೆಂಬ ಹೆಮ್ಮೆ ನಮ್ಮದು. ಅವರ ಮನದ ಕಣ್ಣುಗಳಿಗೆ ಥಟ್ಟನೆ ಹೊಳೆವ ಪ್ರಖರ ಏಳಿಗೆಯ ಕನಸುಗಳೆಲ್ಲಾ ಇಂದಿಗೂ ಶಾಶ್ವತವಾಗಿ ಉಳಿದಿವೆ. ಫಲಪ್ರದ ಏಳಿಗೆಗಾಗಿ ಅಹರ್ನಿಶಿ ಅವರು ದುಡಿದರು. ಜನಕಲ್ಯಾಣ, ಪರೋಪಕಾರ, ಪ್ರಾಮಾಣಿಕತೆಯ ಉದಾತ್ತ ತತ್ವ ಗಳ ಆರಾಧಕರು ಹಾಗು ಪಾಲಿಸಿದ ಸದಾಚಾರವಂತರಾದ ಅವರ ಸ್ಮರಣೆಯ ಗೌರವದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ಸ್ ಡೇ ಎಂದು ಆಚರಿಸುವ ಪರಿಪಾಠ ಬೆಳೆದುಬಂದಿದೆ. ಆ ಮಹಾತ್ಮರ ಪ್ರೇರಣೆ, ಸದಾಶಯದ ನಡೆ ನುಡಿ ಎಲ್ಲವೂ ಸಾರ್ವಕಾಲಿಕ ಆಚರಣೆಯ ಬಿಂದುಗಳು. ನಾಗರಿಕ ಪ್ರಜ್ಞೆಯ ಎಲ್ಲರಿಗೂ ಗುಣಪಾಠ.
ಭದ್ರೆಯ ನೀರು ದುರ್ಗದ ಗೋನೂರಿಗೆ ಹರಿಸಲು ವಿವಿಧ ಹಂತಗಳಲ್ಲಿ ಸಂಭವಿಸಿದ ಅಡೆತಡೆಗಳನ್ನು ಪರಿಹರಿಸಿ ಸಾಕಾರಗೊಳಿಸಿದ ಎಲ್ಲಾ ಅಭಿಯಂತರರಿಗೆ ಗೌರವ ಸಲ್ಲಿಸುತ್ತಾ ಟೀಕಾ. ಸುರೇಶ್ ಗುಪ್ತ ಅವರು ತಮ್ಮ 945 ರ ಮುಕ್ತಕದ ಮೂಲಕ ಸಮರ್ಪಿಸಿದ್ದಾರೆ.
ಮುಕ್ತಕ..೯೪೫
ಹೊಸತೊಂದು ಗೂಡಿನಲಿ ಬೀಡಿನಲಿ ನಾಡಿನಲಿ/
ಬೆಸೆದಿಹುದು ಅಭಯಂತರರದೆ ಕುಶಲತೆಯು/
ಹೊಸೆದಿದ್ದ ಕುಶಲಿಗರ ವೈಭವದ ದರ್ಶನದಿ/
ಹಸಿರಾಯ್ತು ಜನರಮನ..ವೆಂಕಟಸುತ//೯೪೫//
ಟೀಕಾ. ಸುರೇಶ ಗುಪ್ತ











