ಬೆಂಗಳೂರು: ಕೆಲ ಸಮಯದ ಹಿಂದಷ್ಟೇ ಎಲ್ಲರ ಮೊಬೈಲ್ ಒಂದೇ ಸಲಕ್ಕೆ ಅಲರ್ಟ್ ಸೌಂಡ್ ಮಾಡೋದಕ್ಕೆ ಶುರು ಮಾಡಿತ್ತು. ಎಲ್ಲರೂ ಇದನ್ನ ಕೇಳಿ ಒಂದು ಕ್ಷಣ ಗಾಬರಿಯಾಗಿದ್ದಂತು ನಿಜ ಅಲ್ವಾ. ಆದರೆ ಭಾರತ ಸರ್ಕಾರ ನೀಡಿದ ಈ ಅಲರ್ಟ್ ಬಗ್ಗೆ ಭಯ ಬೇಡ, ಎಚ್ವರಿಕೆ ಇರಲಿ. ಇದು ಕೇಂದ್ರ ಸರ್ಕಾರ ತಂದಿರುವ ಸೆಲ್ ಬ್ರಾಡ್ ಕಾಸ್ಟ್ ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ. ಹೀಗಾಗಿ ಎಲ್ಲರ ಮೊಬೈಲ್ ಗೂ ಒಂದೇ ಸಮಯಕ್ಕೆ ಅಲರ್ಟ್ ಬಂದಿದೆ.
ಹಾಗಾದ್ರೆ ಈ ಅಲರ್ಟ್ ವಿಶೇಷತೆ ಏನು ಎಂಬುದನ್ನ ನೋಡೋದಾದ್ರೆ ಇದು ತುರ್ತು ಸಂದೇಶವಾಗಿರುವ ಕಾರಣ, ಫೋನ್ ಯಾವುದೇ ಸ್ಥಿತಿಯಲ್ಲಿದ್ದರೂ ಜೋರಾದ ಸೈರನ್ ಮೂಲಕ ನಿಮ್ಮ ಗಮನ ಸೆಳೆಯುತ್ತದೆ. ಕನ್ನಡ ಸೇರಿದಂತೆ ಸುಮಾರು 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಈ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗ ಬಂದಿರುವುದು ಕೇವಲ ಪರೀಕ್ಷಾರ್ಥ ಸಂದೇಶ. ಇದಕ್ಕಾಗಿ ನೀವೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.

ಈ ತಂತ್ರಜ್ಞಾನವನ್ನು ದೂರಸಂಪರ್ಕ ಇಲಾಖೆ ಮತ್ತು ಸಿ ಡಾಟ್ ಸಂಸ್ಥೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಇಂಟರ್ನೆಟ್ ಅಥವಾ ನೆಟ್ವರ್ಕ್ ದಟ್ಟಣೆಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ನಿರ್ದಿಷ್ಟ ಪ್ರದೇಶದ ಎಲ್ಲಾ ಮೊಬೈಲ್ ಟವರ್ ಮೂಲಕ ಏಕಕಾಲದಲ್ಲಿ ಸಂದೇಶಗಳನ್ನು ರವಾನಿಸುತ್ತದೆ. ಭೂಕಂಪ, ಸುನಾಮಿ, ಚಂಡಮಾರುತ, ಮೊಂಚು ಅಥವಾ ಅನಿಲ ಸೋರಿಕೆಯಂತಹ ತುರ್ತು ಸಂದರ್ಭಗಳಲ್ಲಿ ಜನರನ್ನು ಕೇವಲ ಸೆಕೆಂಡುಗಳಲ್ಲಿ ಎಚ್ಚರಿಸಿ, ಸುರಕ್ಷಿತ ಸ್ಥಳಕ್ಕ ತೆರಳಲು ಸಮಯ ನೀಡುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಅಪ್ಡೇಟ್ ಮಾಡಲಾಗುತ್ತಿದೆ. ಹೀಗಾಗಿ ಯಾರೂ ಗಾಬರಿಯಾಗಬೇಡಿ.


















