ತುಮಕೂರು: ಆ ತಂದೆ ತಾಯಿ ಇಬ್ಬರಿಗೂ ಕಿವಿ ಕೇಳುತ್ತಿರಲಿಲ್ಲ. ಇದ್ದದ್ದು ಒಬ್ಬಳೆ ಮಗಳು. ಮುದ್ದಾಗಿ ಸಾಕಿದ್ದರು. ಆದರೆ ಬೀದಿನಾಯಿಗಳ ಹಾವಳಿಯಿಂದ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ. ಬೀದಿ ನಾಯಿಗಳು ಆ ಮಗುವಿನ ಮೇಲೆ ದಾಳಿ ನಡೆಸುವಾಗ ಕಿರುಚಾಡಿದರು ಕೇಳಲಿಲ್ಲ. ತೀವ್ರವಾಗಿ ದಾಳಿಯಾದ ಹಿನ್ನೆಲೆ ಮಗು ಸಾವನ್ನಪ್ಪಿದೆ. ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಯ್ಯನಭಾವಿ ಕಾಲೋನಿಯಲ್ಲಿ.
6 ವರ್ಷದ ಬಾಲಕಿ ನವ್ಯಾ ಹೀಗೆ ಬೀದಿ ನಾಯಿಗಳ ಹಾವಳಿಗೆ ಪ್ರಾಣ ಬಿಟ್ಟ ಪುಟ್ಟ ಬಾಲಕಿ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ನಿನ್ನೆ ಸಂಜೆ 5 ಗಂಟೆಯ ಸಮಯ. ನವ್ಯಾಳನ್ನ ಕರೆದುಕೊಂಡು ಆಕೆಯ ತಂದೆ ತೋಟದ ಕಡೆಗೆ ಹೊರಟಿದ್ದರು. ತಂದೆ ಮುಂದೆ ಹೋಗ್ತಾ ಇದ್ರೆ ಬಾಲಕಿ ಹಿಂದೆ ನಡೆಯುತ್ತಾ ಇದ್ದಳು.ಆಗ ಬೀದಿ ನಾಯಿಗಳು ಆ ಪುಟ್ಟ ಬಾಲಕಿಯ ಮೇಲೆ ಅಟ್ಯಾಕ್ ಮಾಡಿವೆ. ನಾಯಿಗಳು ತನ್ನತ್ತ ಓಡಿ ಬರುತ್ತಿದ್ದಂತೆ ಬಾಲಕಿ ನವ್ಯಾ ಕಿರುಚಾಡಿದ್ದಾಳೆ.
ಕಿವಿಕೇಳದ ತಂದೆಗೆ ಆ ಕಡೆಗೆ ಗಮನವೇ ಹೋಗಲಿಲ್ಲ. ಮಗಳು ಹಿಂದೆ ಬರ್ತಾ ಇದಾಳೆ ಬಿಡು ಅಂತ ಮುಂದೆ ಸಾಗಿದ್ದಾರೆ. ಸ್ಥಳೀಯರು ಆ ತಂದೆಯನ್ನ ಎಚ್ಚರಿಸಿದಾಗಲೇ ಮಗಳ ಆ ದೃಶ್ಯ ಕಣ್ಣಿಗೆ ಕಂಡಿದ್ದು. ಅಷ್ಟರಲ್ಲಾಗಲೇ ಆ ಬೀದಿ ನಾಯಿಗಳು ಆ ಪುಟ್ಟ ಬಾಲಕಿಯ ಇಡೀ ದೇಹವನ್ನ ಕಚ್ಚಿ ಹಾಕಿದ್ದವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಸೇರಿಸಲು ಹೋದಾಗ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಳು. ಮಗಳ ಈ ಸ್ಥಿತಿಗೆ ಇಡೀ ಮನೆ ಮೌನವಾಗಿದೆ.


