ರಾಯಚೂರು: ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂತ್ರಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ರಾಯರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸುಬುದೇಂದ್ರ ಶ್ರೀಗಳನ್ನ ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಜೋಡೋ ಯಾತ್ರೆಯ ಸಮಯದಲ್ಲಿ ನಾನು ಮತ್ತು ರಾಹುಲ್ ಗಾಂಧಿ ಅವರು ಮಂತ್ರಾಲಯಕ್ಕೆ ಬಂದಿದ್ದೆವು. ಮತ್ತೆ ಬರಬೇಕು ಎಂದುಕೊಂಡರು ಅದು ಸಾಧ್ಯವಾಗಲೇ ಇಲ್ಲ. ಅದಕ್ಕೂ ದೇವರ ಅನುಗ್ರಹ ಇರಬೇಕು ಅಲ್ವಾ ಎಂದಿದ್ದಾರೆ.
ಕಳೆದ ಬಾರಿ ರಾಯರನ್ನ ಬೇಡಿದ್ದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಇದರ ಜೊತೆಗೆ ಇಂದು ಮಂತ್ರಾಲಯದಲ್ಲಿ ಧರ್ಮಪತ್ನಿಯ ಸಮೇತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವ ಸೌಭಾಗ್ಯ ಲಭಿಸಿತು. ಈ ಪವಿತ್ರ ಕ್ಷಣದಲ್ಲಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಮತ್ತು ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ ಪ್ರಾರ್ಥಿಸಲಾಯಿತು. ರಾಯರಿದ್ದಾರೆ ಎಂದು ಬರೆದುಕೊಂಡಿರುವ ಟ್ವೀಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಡಿಕೆ ಶಿವಕುಮಾರ್. ಅದಕ್ಕೆ ತಕ್ಕಂತೆ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು ಶುಭ ನುಡಿದಿದ್ದಾರೆ. ಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಡಿಕೆ ಶಿವಕುಮಾರ್ ಸಂಕಲ್ಪ ಮಾಡಿದ್ದು, ಈ ಹಿಂದೆಯೂ ತನ್ನ ಸಂಕಲ್ಪದಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಈ ಹಿಂದೆಯೂ ಸ್ವತಃ ಡಿಸಿಎಂ ಹೇಳಿದ್ದರು. ಇದೀಗ ಮತ್ತೊಮ್ಮೆ ಸಂಕಲ್ಪ ಮಾಡಿದ್ದಾರೆ. ಈ ಬಾರಿ ಅವರು ಸಿಎಂ ಆಗೇ ಆಗ್ತಾರೆಂದು ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯರು ಭವಿಷ್ಯ ನುಡಿದಿದ್ದಾರೆ.
