ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ರೇಣುಕಾಸ್ವಾಮಿ ಕೊಲೆ ಬಳಿಕ ಒಂದಷ್ಟು ತಿಂಗಳು ಜೈಲಿನಲ್ಲಿದ್ದ ದರ್ಶನ್ ಹಾಗೂ ಸಹಚರರು ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದರ ನಡುವೆ ದರ್ಶನ್ ಕಡೆಯವರು ರೇಣುಕಾಸ್ವಾಮಿ ತಂದೆಗೆ 20 ಕೋಟಿ ಹಣ ನೀಡಿದ್ದಾರೆ ಎಂಬ ಚರ್ಚೆಯೂ ಹುಟ್ಟಿಕೊಂಡಿತ್ತು. ಆ ಪ್ರಶ್ನೆಗೆ ಕಾಶೀನಾಥಯ್ಯ ಇಂದು ಉತ್ತರಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಶೀನಾಥಯ್ಯ ಅವರು, ತಾವೂ ದರ್ಶನ್ ಕಡೆಯವರಿಂದ ಹಣ ಪಡೆದಿಲ್ಲ. ಜಾಮೀನು ರದ್ದಾಗಿದ್ದಕ್ಕೆ ನ್ಯಾಯದ ಮೇಲೆ ನಂಬಿಕೆ ಮೂಡಿದೆ. ಫೇಸ್ ಬುಕ್ ನಲ್ಲಿ ಏನೇನೋ ಬರುತ್ತಿದೆ. ಅಷ್ಟು ಕೋಟಿ ಕೊಟ್ಟರು ಎಂಬುದೆಲ್ಲ ಶುದ್ಧ ಸುಳ್ಳು. ನಾವೂ ಯಾರ ಬಳಿಯೂ ದುಡ್ಡು ಕೇಳಿಲ್ಲ. ಯಾರೂ ಸಹ ದುಡ್ಡು ಕೊಡಲು ಬಂದಿಲ್ಲ. ಯಾಕೆ ಈ ರೀತಿ ಹಾಕುತ್ತಾರೆ ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಅವರ ಸಂಪರ್ಕದಲ್ಲಿ ನಾವೂ ಇಲ್ಲ. ಫೇಸ್ಬುಕ್ ಮಹಾಶಯರಿಗೆ ನಾನು ಹೇಳುವುದು ಇಷ್ಟೆ. ನಿಜವಾಗಿ ಗೊತ್ತಿರುವ ಸಂಗತಿ ಏನಾದರೂ ಇದ್ದರೆ ಮಾತ್ರ ಹಾಕಿ ಎಂದಿದ್ದಾರೆ.

ಅಂತೆ ಕಂತೆ ವಿಚಾರಗಳನ್ನು ಹಾಕಿ ಜನರ ದಿಕ್ಕು ತಪ್ಪಿಸಬೇಡಿ. 10 ಕೋಟಿ ಕೊಟ್ಟರು, 20 ಕೋಟಿ ಕೊಟ್ಟರು ಎಂದೆಲ್ಲ ಹಾಕಿದ್ದಾರೆ. 10 ಪೈಸೆಯನ್ನೂ ನಾವೂ ಪಡೆದುಕೊಂಡಿಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಾಕಬೇಡಿ. ಅದರಿಂದ ನಮ್ಮ ಮನೆತನದ ಗೌರವಕ್ಕೆ ಕುಂದು ಬರುತ್ತದೆ. ಸುಳ್ಳು ಸುದ್ದಿಯಿಂದ ಮನಸ್ಸುಗೆ ತುಂಬಾನೇ ನೋವಾಗುತ್ತದೆ. ಜನರಿಗೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ವದಂತಿ ಹಬ್ಬಿಸಬೇಡಿ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮನವಿಯನ್ನ ಮಾಡಿಕೊಂಡಿದ್ದಾರೆ.
















