ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಈ ಸಂಪುಟ ಸಭೆಯಲ್ಲಿ RSSಗೆ ಸಂಬಂಧಿಸಿದಂತೆ ಒಂದಷ್ಟು ಚರ್ಚೆಗಳಾಗಿವೆ. ಇತ್ತೀಚೆಗೆ ಪ್ರಿಯಾಂಕ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಕಾರ್ಯಕ್ರಮಗಳ ವಿಚಾರಕ್ಕೆ ಪತ್ರ ಬರೆದಿದ್ದರು. ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಷೇಧಿಸಬೇಕು ಹಾಗೇ ಸರ್ಕಾರಿ ನೌಕರರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಾರದೆಂದು. ಈ ಸಂಬಂಧ ಪರೋಕ್ಷವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸಿದ್ದರಾಮಯ್ಯ ಸರ್ಕಾರ, ಇದೀಗ ತಮಿಳುನಾಡು ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತರುವುದಕ್ಕೆ ಮುಂದಾಗಿದೆ. ತನ್ನ ತೀರ್ಮಾನದಲ್ಲಿ ಎಲ್ಲಿಯೂ ಆರ್ ಎಸ್ ಎಸ್ ಪದ ಬಳಕೆ ಮಾಡದೆ ಸರ್ಕಾರ, ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖ ಮಾಡಿ ಜಾಣ್ಮೆ ತೋರಿಸಿದೆ. ಈ ನಿಯಮ ಜಾರಿಯಾದ್ರೆ ಆರ್ ಎಸ್ಎಸ್ ಮಾತ್ರವಲ್ಲ, ಖಾಸಗಿ ಸಂಘ ಸಂಸ್ಥೆಗಳ, ಸಂಘಟನೆಗಳ ಕಾರ್ಯಕ್ರಮವೂ ಸರ್ಕಾರಿ ಜಾಗದಲ್ಲಿ ನಡೆಯುವುದಿಲ್ಲ.
ಕ್ಯಾಬಿನೆಟ್ ಬಳಿಕ ಮಾತನಾಡಿದ ಸಚುವ ಪ್ರಿಯಾಂಕ್ ಖರ್ಗೆ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ಮಾಡಲು ಅನುಮತಿ ಪಡೆಯಬೇಕು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಯಾವುದೇ ಸಂಘಟನೆಗಳು, ಧರ್ಮದವರು ಅನುಮತಿ ಪಡೆಯಲೇಬೇಕು. ಈ ಸಂವಂಧ ಹೊಸ ನಿಯಮಗಳನ್ನು ಕಾನೂನಾತ್ಮಕವಾಗಿ ಜಾರಿಗರ ತರಲಾಗುವುದು. ಕಾನೂನು ನಮಗೂ, ನಿಮಗೂ, ಎಲ್ಲರಿಗೂ ಒಂದೇ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದ್ದಾರೆ.


