ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮೂಢನಂಬಿಕೆಗಳನ್ನ ಅಷ್ಟಾಗಿ ನಂಬೋದಿಲ್ಲ. ಆದರೆ ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಮೂಢನಂಬಿಕೆಯನ್ನ ಫಾಲೋ ಮಾಡಿದ್ರಾ ಎಂಬ ಅನುಮಾನ ಶುರುವಾಗಿತ್ತು. ಅದಕ್ಕೆ ಸ್ಪಷ್ಟ ಉತ್ತರವನ್ನು ಅವರೇ ಕೊಟ್ಟಿದ್ದಾರೆ. ಇಂದು ಸದನದಲ್ಲಿ ರಾಹುಕಾಲವನ್ನು ತಪ್ಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಸಮಯ ನಿಗದಿಪಡಿಸಿದ್ದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರು ಹೌದು ಎಂದು ಒಪ್ಪಿಕೊಂಡಿದ್ದಾರೆ.
ರಾಹು ಕಾಲ ನೋಡಿಕೊಂಡರ ಬಜೆಟ್ ಮಂಡನೆ ಮಾಡಿದ್ದೀರಿ ಎಂಬುದು ನಿಜ. ಮನೆಯವರು, ಅಧಿಕಾರಿಗಳ ಮಾತು ಕೇಳಬೇಕು ಅಲ್ವಾ..? ನಿಮ್ಮಂಥವರ ಮಾತು ಕೇಳಬೇಕು ಅಲ್ವಾ ಎಂದು ಸಿದ್ದರಾಮಯ್ಯ ಅವರು ಮರು ಪ್ರಶ್ನ ಮಾಡಿದ್ದಾರೆ. ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಅಶೋಕ್ ಅವರು, ಅವತ್ತಿನ ಪರಿಸ್ಥಿತಿ ಬೇರೆ ಇತ್ತು. ಇಂದಿನ ಪರಿಸ್ಥಿತಿ ಬೇರೆ ಇದೆ. ಮುಂದೆಯೂ ನೀವೂ ಬಜೆಟ್ ಮಂಡನೆ ಮಾಡಬೇಕು ಅಲ್ವಾ..? ಅದಕ್ಕಾಗಿ ಈ ಬಾರಿ ಕಾಲ ನೋಡಿದ್ದೀರಿ. ಅಶೋಕ್ ಮಾತಿಗೆ ತಿರುಗೇಟು ನೀಡದ ಸಿದ್ದರಾಮಯ್ಯ ಅವರು, ರಾಹುಕಾಲ, ಯಮಗಂಡಕಾಲ ಮತ್ತು ಗುಳಿಕಕಾಲ ಇದನ್ನೆಲ್ಲಾ ನಾನು ನಂಬಲ್ಲ.
ಅಧಿಕಾರಿಗಳ ಹಾಗೂ ಮನೆಯವರ ಮಾತು ಕೇಳಿ ಸಮಯ ನೋಡಿದ್ದೇನೆ ಅಷ್ಟೇ. ನಾನು ಶಿವರಾತ್ರಿ ಹಾಗೂ ಯುಗಾದಿಯಲ್ಲಿ ಮಾಂಸ ತಿಂದಿದ್ದೇನೆ. ನೀವೂ ತಿಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾನ್ಯವಾಗಿ ಬಜೆಟ್ ಮಂಡನೆ ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಗೆ ಮಾಡುತ್ತಾರೆ. ಆದರೆ ಈ ಬಾರಿ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ ಸಮಯ ನಿಗದಿ ಮಾಡಿಕೊಂಡಿದ್ದಾರೆ.






