ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ವೃತ್ತಿಯಲ್ಲಿ ದಂತ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಹಳ್ಳಿಗಳ ಸಂಸ್ಕೃತಿ ಮತ್ತು ಇತಿಹಾಸವನ್ನು ದಾಖಲಿಸುವ ಅದ್ಭುತ ಶೋಧಕರಾಗಿ ಗುರುತಿಸಿಕೊಂಡಿದ್ದಾರೆ ಡಾ. ಕೆ.ವಿ. ಸಂತೋಷ್. ಗ್ರಾಮಾಂತರ ಪ್ರದೇಶದ ಆಚಾರ-ವಿಚಾರ, ಜನರು, ಉಡುಗೆ-ತೊಡುಗೆ, ಭಾಷೆ, ಜನಪದ ಹಾಗೂ ಹಬ್ಬ-ಜಾತ್ರೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು, ಹತ್ತಾರು ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ, ಕನಿಷ್ಠ 400ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ದೇವಾಲಯಗಳು, ವೀರಗಲ್ಲು-ಮಾಸ್ತಿಗಲ್ಲುಗಳು ಮತ್ತು ಸ್ಥಳೀಯ ಚರಿತ್ರೆಯನ್ನು ಕಲೆಹಾಕಿ, ತಾವೇ ಪ್ರಕಾಶಕರಾಗಿ ‘ಹೊಳಲ್ಕೆರೆ ತಾಲೂಕು ದರ್ಶನ’ ಹಾಗೂ ‘ಚಿತ್ರದುರ್ಗ ತಾಲೂಕು ದರ್ಶನ’ ಎಂಬ ಮಹತ್ವದ ಪುಸ್ತಕಗಳನ್ನು ಹೊರತಂದಿದ್ದಾರೆ.
ಡಾ. ಸಂತೋಷ್ ಅವರ ಈ ಸಾಧನೆಗೆ ವೃತ್ತಿಯಲ್ಲಿ ವ್ಯಾಪಾರಸ್ಥರಾದ ಅವರ ತಂದೆ ವಿಠಲರಾವ್ ಹಾಗೂ ತಾಯಿ ಮಂಜುಳಾ ರವರ ಪ್ರೋತ್ಸಾಹವೇ ಮೂಲ ಕಾರಣ. ಅವರ ಸದಾಕಾಲದ ಬರವಣಿಗೆ ಮತ್ತು ಅಧ್ಯಯನದ ಪ್ರಯತ್ನಗಳಿಗೆ ಹೆಂಡತಿ ಅಶ್ವಿನಿ ಬೆನ್ನೆಲುಬಾಗಿ ನಿಂತಿದ್ದಾರೆ. 2006 ರಲ್ಲಿ ಹೊಳಲ್ಕೆರೆಯಲ್ಲಿ ಪ್ರಥಮವಾಗಿ ದಂತ ಚಿಕಿತ್ಸಾಲಯ ಪ್ರಾರಂಭಿಸಿದಾಗ ಅವರಿಗೆ ಅಲ್ಲಿನ ಗ್ರಾಮಗಳ ಹೆಸರುಗಳೇ ತಿಳಿದಿರಲಿಲ್ಲ. ತದನಂತರ, 2014 ರಲ್ಲಿ ಅಲ್ಲಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಎಂ.ಜಿ. ವೆಂಕಟೇಶ್ ಅವರ ಮಾರ್ಗದರ್ಶನ ಪಡೆದು ‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿ ರಚಿಸಿ ತಾಲೂಕಿನ ಮನೆಮಾತಾದರು. ಅದರ ಹತ್ತು ವರ್ಷಗಳ ನಂತರ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ತಮ್ಮ ಚಿಕಿತ್ಸಾಲಯಕ್ಕೆ ಬರುತ್ತಿದ್ದ ರೋಗಿಗಳ ಹೆಸರು ಮತ್ತು ಊರನ್ನು ದಾಖಲಿಸಿಕೊಳ್ಳುವಾಗ, ಆ ಊರು ಎಲ್ಲಿದೆ ಮತ್ತು ಅಲ್ಲಿನ ಸಾಂಸ್ಕೃತಿಕ ವೈಭವವೇನು ಎಂಬ ಚಿಂತನೆ ಇವರಲ್ಲಿ ಮೂಡಿತು. ರೋಗಿಗಳ ಬಳಿಯೇ “ನಾನು ನಿಮ್ಮ ಊರಿಗೆ ಬರಬಹುದೇ? ಊರನ್ನು ಪರಿಚಯಿಸುತ್ತೀರಾ?” ಎಂದು ಕೇಳಿಕೊಂಡು ಭೇಟಿ ನೀಡಲು ಆರಂಭಿಸಿದರು. ಇಂದು ಅವರ ಕ್ಲಿನಿಕ್ಕಿಗೆ ಬರುವ ಪ್ರತಿ ರೋಗಿಯೂ ಇವರಿಗೆ ಮಾಹಿತಿದಾರರಾಗಿದ್ದಾರೆ. ರೋಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಇವರು, ಜನರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ, ಸಂಶೋಧಕರು ಹಾಗೂ ಇತಿಹಾಸ ತಜ್ಞರಿಂದ ಮತ್ತಷ್ಟು ಮಾಹಿತಿ ಪಡೆದು ಅದನ್ನು ಸಂಪೂರ್ಣ ಅಧ್ಯಯನ ಯೋಗ್ಯ ದಾಖಲೆಯನ್ನಾಗಿ ರೂಪಿಸುತ್ತಾರೆ.
ಮೊದಮೊದಲು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರಿಂದ ವಿಚಿತ್ರ ನೋಟ, ಹತ್ತಾರು ಪ್ರಶ್ನೆಗಳು ಎದುರಾಗುತ್ತಿದ್ದವು. ಕೆಲವರು ಇವರನ್ನು ವಿಗ್ರಹ ಚೋರ, ನಿಧಿಕಳ್ಳ ಎಂಬಂತೆ ನೋಡಿ, ಗ್ರಾಮಗಳಿಗೆ ಹೋಗದಂತೆ ತಡೆದು ಜಗಳವಾಡಿದ್ದೂ ಉಂಟು. ಇದರಿಂದ ಬೇಸತ್ತು ಹಳ್ಳಿಗಳಿಗೆ ಹೋಗುವುದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ಸಂತೋಷ್, ಹತ್ತಾರು ಸವಾಲುಗಳನ್ನು ದಾಟಿ ಮುಂದುವರಿದರು. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟಾಗ ಸಿಕ್ಕ ಪ್ರೀತಿ, ವಾತ್ಸಲ್ಯ ಅಪೂರ್ವವಾದದ್ದು. ಹಿರಿಯ ಅಧಿಕಾರಿಗಳು, ಹಾಲು ಉತ್ಪಾದಕ ಸಂಘಗಳು, ಪಂಚಾಯಿತಿ ಸದಸ್ಯರು, ಪೊಲೀಸ್ ಇಲಾಖೆಯ ಸಿಬ್ಬಂದಿ ಜೊತೆಗೆ, ಹಿಂದೂ ದೇವಾಲಯಗಳ ಪರಿಚಯವನ್ನು ಅನ್ಯ ಧರ್ಮೀಯರು ಹಾಗೂ ತಳಸಮುದಾಯದ ಜನರು ಅತ್ಯಂತ ಹೆಮ್ಮೆಯಿಂದ ನೀಡಿ ಸಹಕರಿಸಿದ್ದಾರೆ. ಫೇಸ್ಬುಕ್ನಲ್ಲಿ ಲೇಖನಗಳು ಪ್ರಕಟವಾದ ನಂತರ ಜನರು ಇವರನ್ನು ಗುರುತಿಸಿ ತಮ್ಮ ಗ್ರಾಮಗಳಿಗೂ ಆಹ್ವಾನಿಸಲು ತೊಡಗಿದರು.
ಪ್ರತಿ ಶನಿವಾರ ಮತ್ತು ಭಾನುವಾರ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಬೈಕ್ ಏರಿ ಹೊರಟುಬಿಡುವ ಇವರು ಬಿಸಿಲು, ಮಳೆ, ಚಳಿ ಎನ್ನದೆ ಕಚ್ಚಾ ರಸ್ತೆ, ಬೆಟ್ಟ-ಗುಡ್ಡ, ಕಾಡು-ಮೇಡುಗಳನ್ನು ಅಲೆದಾಡಿದ್ದಾರೆ. ಇದಕ್ಕಾಗಿ ಲಕ್ಷಗಟ್ಟಲೆ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ವಿವಿಧ ಪತ್ರಿಕೆಗಳು, ವಿಶೇಷ ಸಂಚಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ 400ಕ್ಕೂ ಅಧಿಕ ಆರೋಗ್ಯ ಕುರಿತಾದ ಲೇಖನಗಳನ್ನು ಮತ್ತು 1200ಕ್ಕೂ ಅಧಿಕ ದೇವಾಲಯಗಳ ಪರಿಚಯಗಳನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ, ವೀರಗಲ್ಲು ಮತ್ತು ಮಾಸ್ತಿಗಲ್ಲುಗಳ ಸಂರಕ್ಷಣೆಗಾಗಿ ಇಲಾಖೆಗಳಿಗೆ ಪತ್ರ ಬರೆದು ಅಧಿಕಾರಿಗಳ ಬೆನ್ನುಬೀಳುವ ಇವರು, ಸ್ವಂತ ಖರ್ಚಿನಲ್ಲಿ 100ಕ್ಕೂ ಅಧಿಕ ದೇವಾಲಯಗಳಿಗೆ ಹೆಸರಿನ ಬೋರ್ಡ್ಗಳನ್ನು ಅಳವಡಿಸಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಗೂಗಲ್ ಪ್ರಶಸ್ತಿ :
ತಾವು ಭೇಟಿ ನೀಡಿದ ಹಳ್ಳಿಗಳ ಐತಿಹಾಸಿಕ ತಾಣಗಳು ಹಾಗೂ ದೇವಾಲಯಗಳ ಅತಿ ಹೆಚ್ಚಿನ ಫೋಟೋಗಳನ್ನು ಸ್ಥಳೀಯ ಗ್ರಾಮಗಳಿಂದಲೇ ಗೂಗಲ್ ಮ್ಯಾಪ್ ಗಳಿಗೆ ಅಪ್ಲೋಡ್ ಮಾಡಿದ ಕಾರಣಕ್ಕಾಗಿ, ಇವರ ಕಾರ್ಯವನ್ನು ಗುರುತಿಸಿ 2018 ರಲ್ಲಿ ಜರ್ಮನಿಯ ಗೂಗಲ್ ಸಂಸ್ಥೆಯು ಇವರಿಗೆ ಪ್ರಶಂಸನಾ ಪತ್ರ ಹಾಗೂ ಪದಕವನ್ನು ನೀಡಿ ಗೌರವಿಸಿದೆ. ನಿರಂತರ ಶೋಧನೆಯ ಹಾದಿಯಲ್ಲಿರುವ ಡಾ. ಕೆ.ವಿ. ಸಂತೋಷ್, ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳನ್ನು ಸಂದರ್ಶಿಸುವ ಆಶಯ ಹೊಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









