ಧೀಮಂತ ಹೋರಾಟಗಾರ ಭೀಮಣ್ಣ ಖಂಡ್ರೆ ನಿಧನಕ್ಕೆ ಬೃಹನ್ಮಠ ಸಂತಾಪ

4 Min Read

 

ಸುದ್ದಿಒನ್, ಚಿತ್ರದುರ್ಗ, ಜ. 17 : ಧೀಮಂತ ಹೋರಾಟಗಾರ ಭೀಮಣ್ಣ ಖಂಡ್ರೆ ನಿಧನಕ್ಕೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರುಗಳಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಪಿ.ಎಸ್. ಶಂಕರ್ ಮತ್ತು ಎಸ್.ಎನ್. ಚಂದ್ರಶೇಖರ್ ಅವರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯೋತ್ತರ ರಾಜಕೀಯ ಪುನರ್ನಿರ್ಮಾಣ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರ ಸಾಲಿನಲ್ಲಿ ಶ್ರೀ ಭೀಮಣ್ಣ ಖಂಡ್ರೆ ಅವರ ಹೆಸರು ಗೌರವದಿಂದ ಸ್ಮರಿಸಲ್ಪಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರು, ವಕೀಲ, ಶಾಸಕರು, ಸಚಿವರು ಹಾಗೂ ವೀರಶೈವ ಲಿಂಗಾಯತ ಸಮಾಜದ ಸಂಘಟಕರಾಗಿ ಅವರು ಮಾಡಿದ ಸೇವೆ ಬಹುಮುಖವೂ ದೀರ್ಘಕಾಲೀನವೂ ಆಗಿದೆ.

 

ಶ್ರೀ ಭೀಮಣ್ಣ ಖಂಡ್ರೆ ಅವರು 8 ಜನವರಿ 1923 ರಂದು ಬೀದರ ಜಿ¯್ಲÉಯ ಶ್ರೀಮಂತ ರೈತಮನೆತನದಲ್ಲಿ ಜನಿಸಿದರು. ತಂದೆ ಶಿವಲಿಂಗಪ್ಪ ಮತ್ತು ತಾಯಿ ಪಾರ್ವತಿಬಾಯಿ ಅವರು ಧಾರ್ಮಿಕತೆ, ಶಿಸ್ತು ಮತ್ತು ನೈತಿಕ ಮೌಲ್ಯಗಳಿಗೆ ಮಹತ್ವ ನೀಡಿದವರು. ಬಸವಭಕ್ತಿ, ಸುವಿಚಾರ ಹಾಗೂ ಮಾನವೀಯ ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡ ಸಂಸ್ಕøತಿಯಲ್ಲಿ ಬೆಳೆದ ಭೀಮಣ್ಣ ಖಂಡ್ರೆ ಅವರು ಬಾಲ್ಯದಲ್ಲಿಯೇ ಜವಾಬ್ದಾರಿಯುತ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡರು. ಕುಟುಂಬದಿಂದ ದೊರೆತ ಸಂಸ್ಕಾರವೇ ಅವರ ಮುಂದಿನ ಸಾರ್ವಜನಿಕ ಜೀವನದ ನೈತಿಕ ನೆಲೆಯನ್ನು ರೂಪಿಸಿತು.

ವಿದ್ಯಾರ್ಥಿ ದಿಶೆಯಲ್ಲಿಯೇ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಕರೆಗೆ ಸ್ಪಂದಿಸಿದ ಭೀಮಣ್ಣ ಖಂಡ್ರೆ ಅವರು, ದೇಶಪ್ರೇಮದ ಉತ್ಕಟ ಭಾವದಿಂದ ಓದಿಗೆ ತಾತ್ಕಾಲಿಕ ವಿರಾಮ ನೀಡಿ 1946ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಚಳವಳಿ ಮಾತ್ರವಲ್ಲ, ಅದು ಮೌಲ್ಯಾಧಾರಿತ ಜೀವನಪಥ ಎಂದು ಅವರು ನಂಬಿದ್ದರು. ಈ ಹೋರಾಟದ ಅನುಭವಗಳು ಅವರಲ್ಲಿ ಶಿಸ್ತು, ತ್ಯಾಗ ಮತ್ತು ಜನಪರ ಚಿಂತನೆಯ ಗುಣಗಳನ್ನು ಮತ್ತಷ್ಟು ಬಲಪಡಿಸಿದವು.

ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಚಟುವಟಿಕೆಗಳ ನಡುವೆಯೂ ವಿದ್ಯಾಭ್ಯಾಸವನ್ನು ಕೈಬಿಡದ ಭೀಮಣ್ಣ ಖಂಡ್ರೆ ಅವರು, 1949ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲï.ಎಲï.ಬಿ. ಪದವಿಯನ್ನು ಸಂಪಾದಿಸಿದರು. ನಂತರ ಭಾಲ್ಕಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ, ಕಾನೂನನ್ನು ಜೀವನೋಪಾಯದ ಸಾಧನವಾಗಿ ಮಾತ್ರವಲ್ಲದೆ, ಸಾಮಾಜಿಕ ನ್ಯಾಯವನ್ನು ಸಾಧಿಸುವ ಉಪಕರಣವಾಗಿ ಬಳಸಿದರು. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಕೀಲರಾಗಿ ಅವರು ಜನಮನ್ನಣೆ ಪಡೆದರು.

ಶ್ರೀ ಭೀಮಣ್ಣ ಖಂಡ್ರೆ ಅವರ ರಾಜಕೀಯ ಜೀವನಕ್ಕೆ 1953ರಲ್ಲಿ ಮಹತ್ವದ ತಿರುವು ದೊರಕಿತು. ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಬೀದರ ನಗರ ಪಾಲಿಕೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅವರು ವಿಜಯಶಾಲಿಯಾದರು.

ಇದರೊಂದಿಗೆ ಅವರು ಬೀದರ ನಗರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷ ಎಂಬ ಐತಿಹಾಸಿಕ ಗೌರವಕ್ಕೆ ಪಾತ್ರರಾದರು. ನಗರಾಭಿವೃದ್ಧಿ, ಸ್ವಚ್ಛತೆ ಮತ್ತು ನಾಗರಿಕ ಸೌಲಭ್ಯಗಳ ವಿಸ್ತರಣೆಯಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿದರು. 1962ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಅಪೂರ್ವ ಯಶಸ್ಸು ಗಳಿಸಿದ ಅವರು, ಶಾಸಕರಾಗಿ ಜನಸಾಮಾನ್ಯರ ಧ್ವನಿಯನ್ನು ಸದನದಲ್ಲಿ ಪ್ರತಿಧ್ವನಿಸಿದರು.

 

ರಾಜಕೀಯ ಪರಿಸ್ಥಿತಿಗಳ ಬದಲಾವಣೆಯೊಂದಿಗೆ 1967, 1978 ಮತ್ತು 1983ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪP್ಷÀದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿರಂತರವಾಗಿ ಜಯ ಸಾಧಿಸಿದರು. ಈ ಅವಧಿಯಲ್ಲಿ ಅವರು ಅನುಭವಸಂಪನ್ನ ಜನಪ್ರತಿನಿಧಿಯಾಗಿ ರೂಪುಗೊಂಡರು.

1992ರಲ್ಲಿ ರಾಜ್ಯ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಭೀಮಣ್ಣ ಖಂಡ್ರೆ ಅವರು, ಸಾರಿಗೆ ವ್ಯವಸ್ಥೆಯ ಸುಧಾರಣೆ, ಗ್ರಾಮೀಣ ಸಂಪರ್ಕ ವೃದ್ಧಿ ಮತ್ತು ಸಾರ್ವಜನಿಕ ಸೇವೆಗಳ ಬಲವರ್ಧನೆಗೆ ಶ್ರಮಿಸಿದರು.

ಅನಿವಾರ್ಯ ಕಾರಣಗಳಿಂದ ಪೂಜ್ಯಶ್ರೀ ಡಾ. ಶರಣಬಸಪ್ಪ ಅಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧಿವೇಶನ ನಡೆಯದೆ, ಭೀಮಣ್ಣ ಖಂಡ್ರೆ ಅವರು ಮಹಾಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 1996ರಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು, ವೀರಶೈವ ಲಿಂಗಾಯತ ಭವನವನ್ನು ನಿರ್ಮಿಸಿ ಮಹಾಸಭೆಗೆ ಶಾಶ್ವತ ನೆಲೆ ಒದಗಿಸಿದರು. ಗಣನೀಯ ಸಂಖ್ಯೆಯಲ್ಲಿ ಲಿಂಗಾಯತರನ್ನು ಮಹಾಸಭೆಯ ಸದಸ್ಯರನ್ನಾಗಿ ಸಂಘಟಿಸಿದ ಶ್ರೇಯಸ್ಸು ಅವರದ್ದಾಗಿದೆ. ಸಂಘಟನೆ ಬಲಿಷ್ಠವಾಗಬೇಕೆಂದರೆ ಆಂತರಿಕ ಏಕತೆ ಅಗತ್ಯ ಎಂಬ ನಂಬಿಕೆ ಅವರ ಕಾರ್ಯಶೈಲಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಲಿಂಗಾಯತ ಸಮಾಜವನ್ನು ಪಂಗಡ-ಒಳಪಂಗಡಗಳಾಗಿ ವಿಭಜಿಸಿ ಸಮಾಜಕ್ಕೆ ಅಪಾರ ಹಾನಿ ಉಂಟುಮಾಡಿದ ಹಾವನೂರ ವರದಿಯನ್ನು ಅವರು ವಿಧಾನಸಭೆಯಲ್ಲಿಯೇ ಹರಿದು ಹಾಕಿ ಪ್ರತಿಭಟಿಸಿದರು. ಇದು ಅವರ ರಾಜಕೀಯ ಧೈರ್ಯ, ಸಮಾಜದ ಏಕತೆಗಾಗಿ ಹೋರಾಡುವ ಮನೋಭಾವ ಮತ್ತು ತತ್ವನಿಷ್ಠೆಯ ಪ್ರತೀಕವಾಗಿದೆ. ಈ ಹೋರಾಟದ ಮೂಲಕ ಅವರು ಲಿಂಗಾಯತ ಸಮಾಜದ ಹಿತಚಿಂತಕ ಹಾಗೂ ದೃಢ ನಾಯಕನಾಗಿ ಗುರುತಿಸಿಕೊಂಡರು.

ಶ್ರೀ ಭೀಮಣ್ಣ ಖಂಡ್ರೆ ಅವರ ಜೀವನವು ಸ್ವಾತಂತ್ರ್ಯ ಹೋರಾಟದಿಂದ ಆರಂಭಿಸಿ ಸಮಾಜಸೇವೆ, ರಾಜಕೀಯ ನಾಯಕತ್ವ ಮತ್ತು ಧಾರ್ಮಿಕ-ಸಾಂಸ್ಕøತಿಕ ಸಂಘಟನೆಯವರೆಗೆ ವಿಸ್ತರಿಸಿದ ಸಮರ್ಪಿತ ಸೇವೆಯ ಕಥನವಾಗಿದೆ. ಅಧಿಕಾರಕ್ಕಿಂತ ಕರ್ತವ್ಯವನ್ನು ಮಹತ್ವವನ್ನಾಗಿ ಕಂಡ ಅವರ ಜೀವನವು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಜನಸೇವೆಯೇ ಜೀವನಧರ್ಮ ಎಂಬ ತತ್ವವನ್ನು ಅಕ್ಷರಶಃ ಅನುಸರಿಸಿದ ಭೀಮಣ್ಣ ಖಂಡ್ರೆ ಅವರು ಕನ್ನಡ ನಾಡಿನ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ. ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದದವರಿಗೆ ಬಸವಾದಿ ಪ್ರಮಥರು ನೀಡಲಿ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

Share This Article
Enable Notifications OK No thanks