ಸುದ್ದಿಒನ್,ದಾವಣಗೆರೆ,ಮೇ.16: ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಭೀಕರ ಕೊಲೆಯೊಂದು ಸಂಭವಿಸಿದೆ. ಹಣಕಾಸಿನ ವಿವಾದ ಹಾಗೂ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಲ್ಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಶುಕ್ರವಾರ (ಮೇ 15) ತಡರಾತ್ರಿ ಈ ಘಟನೆ ನಡೆದಿದ್ದು, ಹತ್ಯೆಯಾದ ದುರ್ದೈವಿಯನ್ನು ಅತಾವುಲ್ಲಾ (46) ಎಂದು ಗುರುತಿಸಲಾಗಿದೆ. ಈ ಘಟನೆಯಿಂದಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಯ ಹಿಂದೆ ಭಾರಿ ಹಣಕಾಸಿನ ವಿವಾದ ಮತ್ತು ಹಳೇ ದ್ವೇಷ ಇರುವುದು ಬೆಳಕಿಗೆ ಬಂದಿದೆ. ಭದ್ರಾವತಿ ಮೂಲದ ಶೇಖ್ ದಸ್ತುಗಿರಿ ಹಾಗೂ ಜಬೀವುಲ್ಲಾ ಎಂಬುವವರೊಂದಿಗೆ ಮೃತ ಅತಾವುಲ್ಲಾ ಅವರಿಗೆ ಈ ಹಿಂದೆ ಹಣದ ವಿಚಾರವಾಗಿ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಶಂಕಿಸಲಾಗಿದೆ.
ಶುಕ್ರವಾರ ತಡರಾತ್ರಿ ಅತಾವುಲ್ಲಾ ಅವರು ಇದ್ದ ಜಾಗಕ್ಕೆ ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವು ಏಕಾಏಕಿ ದಾಳಿ ನಡೆಸಿದೆ. ಯಾವುದೇ ಮುನ್ಸೂಚನೆ ನೀಡದೆ ಕತ್ತಿ, ಮಚ್ಚು ಸೇರಿದಂತೆ ಭೀಕರ ಮಾರಕಾಸ್ತ್ರಗಳಿಂದ ಅತಾವುಲ್ಲಾ ಅವರ ಮೇಲೆ ಮುಗಿಬಿದ್ದಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಅವರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.














