ಬೈಎಲೆಕ್ಷನ್ ಟಿಕೆಟ್ ವಿಚಾರದಿಂದಲೇ ರಾಜ್ಯ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರ ಇದೀಗ ಫಲಿತಾಂಶದ ಕಣವಾಗಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೈಗೊಂಡ ಕ್ರಮ ಕಾಂಗ್ರೆಸ್ಗೆ ಟೀಕೆಯನ್ನುಂಟುಮಾಡಿದ್ದು, ಇದರ ಪರಿಣಾಮ ಮತದಾರರ ಮನೋಭಾವದ ಮೇಲೆ ಬೀಳುತ್ತದೆಯೇ ಎಂಬ ಕುತೂಹಲ ಹೆಚ್ಚಿಸಿದೆ.
ಇದೀಗ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಆರಂಭಿಕ ಮುನ್ನಡೆ ಸಾಧಿಸಿರುವ ಮಾಹಿತಿ ಲಭ್ಯವಾಗಿದೆ. ಅಂಚೆ ಮತಗಳ ಲೆಕ್ಕಾಚಾರದಲ್ಲಿ ಸಮರ್ಥ್ ಅವರಿಗೆ 8 ಮತಗಳ ಮುನ್ನಡೆ ದೊರೆತಿದೆ ಎಂದು ತಿಳಿದುಬಂದಿದೆ. ಇದು ಕಾಂಗ್ರೆಸ್ ಶಿಬಿರಕ್ಕೆ ಪ್ರಾರಂಭಿಕ ಉತ್ಸಾಹ ತುಂಬಿದಂತಾಗಿದೆ.ಈ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಇಬ್ಬರೂ ಫಲಿತಾಂಶದ ಮೇಲೆ ನಿಗಾ ವಹಿಸಿದ್ದಾರೆ. ಸಿಎಂ ತಮ್ಮ ಕಾವೇರಿ ನಿವಾಸದಲ್ಲಿದ್ದು, ಡಿಸಿಎಂ ಸದಾಶಿವನಗರ ನಿವಾಸದಿಂದಲೇ ಪಂಚರಾಜ್ಯಗಳ ಫಲಿತಾಂಶಗಳ ಜೊತೆಗೆ ಉಪಚುನಾವಣೆಯ ಸ್ಥಿತಿಗತಿಗಳನ್ನು ಗಮನಿಸುತ್ತಿದ್ದಾರೆ.
ಇದೇ ವೇಳೆ ಬಾಗಲಕೋಟೆ ಕ್ಷೇತ್ರದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಸಿಎಂಗೆ ತುಸು ನಿರಾಳತೆ ತಂದಿದ್ದರೆ, ದಾವಣಗೆರೆ ಸೇರಿದಂತೆ ಇತರ ಕ್ಷೇತ್ರಗಳ ಫಲಿತಾಂಶ ಡಿಸಿಎಂಗೆ ಆತಂಕ ಹೆಚ್ಚಿಸಿರುವಂತಿದೆ. ಒಟ್ಟಾರೆ, ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ರಾಜಕೀಯವಾಗಿ ಮಹತ್ವದ ಕಣವಾಗಿದ್ದು, ಅಂತಿಮ ಫಲಿತಾಂಶದತ್ತ ರಾಜ್ಯದ ಗಮನ ನೆಟ್ಟಿದೆ.










