ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಾ ಇದೆ ಎಂದು ಅವರದ್ದೇ ಸರ್ಕಾರದ ಶಾಸಕ ಬಿಆರ್ ಪಾಟೀಲ್ ಆರೋಪ ಮಾಡಿದ್ದ ಆಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಬಳಿ ಮಾತನಾಡಿದ್ದರು. ಆ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಸತಿ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ದರು. ಹಣ ಕೊಟ್ಟವರಿಗಷ್ಟೆ ವಸತಿ ಇಲಾಖೆಯಲ್ಲಿ ವಸತಿಗಳನ್ನ ನೀಡುತ್ತಾ ಇದ್ದಾರೆ. ನಾನು ಸಾಕಷ್ಟು ಸಲ ಹೇಳಿದರು ನನ್ನ ಕಡೆಯವರಿಗೆ ವಸತಿ ಸಿಕ್ಕಿಲ್ಲ. ಪತ್ರಗಳನ್ನು ನೀಡಿದರು ಮನೆಗಳನ್ನು ನೀಡಿಲ್ಲ ಎಂದು ಜೋರು ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಸರ್ಫರಾಜ್ ಖಾನ್, ಆ ರೀತಿ ಏನು ಇಲ್ಲ. ನಿಮ್ಮ ಗಮನಕ್ಕೆ ಬಂದರೆ ಹೇಳಿ ಕ್ರಮ ತೆಗೆದುಕೊಳ್ಳೋಣಾ ಎಂದಿದ್ದರು. ಇದೀಗ ಆ ಆಡಿಯೋಗೆ ಬಿಆರ್ ಪಾಟೀಲ್ ಅವರೇ ಉತ್ತರ ಕೊಟ್ಟಿದ್ದಾರೆ.
ಹೌದು ಅದು ನನ್ನದೇ ಆಡಿಯೋ. ಎಲ್ಲರಿಗೂ ಹೇಳಿದ್ದೀನಿ ಅದನ್ನ ನಾನೇ ಮಾತನಾಡಿದ್ದು ಅಂತ. ನಾನು ಏನು ಹೇಳಬೇಕೋ ಅದನ್ನ ಹೇಳಿದ್ದೀನಿ. ಮಾನ್ಯ ಮುಖ್ಯಮಂತ್ರಿಗಳು ಏನು ಮಾಡ್ತಾರೆ ಗೊತ್ತಿಲ್ಲ. ಕರೆದರೆ ಹೋಗಿ ಮಾತನಾಡ್ತೀನಿ. ಎಲ್ಲಾ ಸರ್ಕಾರದಲ್ಲೂ ನಡೆದಿತ್ತು. ಇಲ್ಲಿ ನಾವೂ ಜನಪರ ಆಡಳಿತ ಕೊಡ್ತೀವಿ ಅಂತ ಹೇಳಿದ್ವಿ. ಆದರೆ ಇಲ್ಲಿ ಅದು ಆಗಬಾರದಿತ್ತು.
ಎಲ್ಲರೂ ಇಲ್ಲ ಒಂದು ಐದಾರು ಪಂಚಾಯ್ತಿಯಲ್ಲಿ ಹಣ ಕೊಟ್ಟು ಮಾಡಿಕೊಂಡು ಹೋಗಿದ್ದಾರೆ. ನಾನು ಪತ್ರ ಕೊಟ್ಟಿದ್ದು ಆಗಿಲ್ಲ. ನನ್ನ ಕ್ಷೇತ್ರಕ್ಕೆ ನಾಲ್ಕು ಪತ್ರ ಕೊಟ್ಟಿದ್ದೀನಿ ಆದರೂ ಆಗಿಲ್ಲ. ಪಂಚಾಯ್ತಿ ಚೇರ್ಮನ್ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.



