ಗದಗ: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದ ಶಾಸಕ ಲಮಾಣಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಲಮಾಣಿ ವಿರುದ್ಧ ಸ್ವಾಮೀಜಿಯೊಬ್ಬರು ಷಡ್ಯಂತ್ರ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಆಡಿಯೋದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅದರಲ್ಲಿ ನಾನು ಮಾತನಾಡಿದ್ದು ಸತ್ಯ. ಆದರೆ ಲೋಕಾಯುಕ್ತ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಮಾತನಾಡಿಲ್ಲ ಅಂತ ಸಮರ್ಥನೆ ಮಾಡಿಕೊಳ್ಳಲ್ಲ ಎಂದಿದ್ದಾರೆ.
ಆಗ ಜಗಳದ ಸಮಯದಲ್ಲಿ ಶಾಸಕರು ಒತ್ತಡ ಕೊಟ್ಟಿದ್ದಕ್ಕೆ ಕೋಪದಲ್ಲಿ ಮಾತನಾಡಿದ್ದೇನೆ ನಿಜ. ಆದರೆ ಈ ಪ್ರಕರಣಕ್ಕೆ ನನಗೆ ಸಂಬಂಧ ಇಲ್ಲ. ಮೈಸೂರು ಕಾರ್ಯಕ್ರಮ ನಂತರ ಗದಗ ಬಂದು ಪ್ರೆಸ್ ಮೀಟ್ ಮಾಡಿ ಹೇಳುತ್ತೇನೆ. ನಾನು ಭಾಗಿಧಾರ ಇದ್ದೀನಿ ಅಂದ್ರೆ ನನ್ನ ಎರಡೂ ಮೊಬೈಲ್ ತೆಗೆದುಕೊಳ್ಳಿ ಚೆಕ್ ಮಾಡಿ ಅಂತ ಹೇಳಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಭಕ್ತರು ಭಯ ಪಡುವ ಅಗತ್ಯ ಇಲ್ಲ. ಪತ್ತೆಯಾಗಿದ್ದ ಆಡಿಯೋದಲ್ಲಿ ಮುಂದಿನ ಚುನಾವಣೆಗೆ ಡಾ.ಚಂದ್ರುಗೆ ಟಿಕೆಟ್ ತಪ್ಪಿಸಬೇಕು ಅಂತ ಸ್ವಾಮೀಜಿ ಸ್ಪಷ್ಟವಾಗಿ ಮಾತನ್ನಾಡಿದ್ದಾರೆ.
ಶಾಸಕರಿಗೆ ಟಿಕೆಟ್ ತಪ್ಪಿಸದೇ ಸಮಾಧಾನ ಇಲ್ಲ. ಬೆಂಗಳೂರಿನಲ್ಲಿ ಬೇರೆ ಸೂತ್ರ ಹಮ್ಮಿಕೊಂಡಿದ್ದೇವೆ. ಕೂತು ಮಾತಾಡಿ ಪ್ಲಾನ್ ಮುಂದುವರೆಸೋಣ. ಸೋನು ಲಮಾಣಿ ಅಂತಾ ಸಮಾಜದ ಲೀಡರ್ ಇದ್ದಾರೆ. ವೀರೇಂದ್ರ ಪಪ್ಪಿ ಇವನ ಪಾಟ್ನರ್, ಕ್ಯಾಸಿನೋ ಎಲ್ಲಾ ಇದೆ. ಅವರು ನಮ್ಮ ಭಕ್ತ. ಬೆಂಗಳೂರಿನಲ್ಲಿ ಟೀಮ್ ಇದೆ. ಕೆಲಸ ಕೊಡಿ ಅಂತಾ ಬರ್ತಾರೆ. ನೋಟಿಗೆ ಅದು, ಇದು ಹಚ್ಚಿ, ಐಟಿಗೆ ಒಗೆಸುತ್ತಾರೆ. ಬನ್ನಿ ಈ ಬಗ್ಗೆ ಮಾತಾಡೋಣ, ಅವರನ್ನ ಕೈ ಬಿಟ್ಟು ನಾವು ಸುಮ್ಮನೇ ನಿಲ್ಲೋಣ ಅಂತ 2:36 ನಿಮಿಷದ ಆಡಿಯೋದಲ್ಲಿ ಷಡ್ಯಂತ್ರದ ಮಾತುಗಳು ಕೇಳಿ ಬಂದಿದ್ದವು ಎಂದಿದ್ದಾರೆ.




