ಬೆಂಗಳೂರು : ನಗರದ ಕಾವೇರಿ ನಿವಾಸದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ನಡುವೆ ನಡೆದ ಸಭೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.ಸಭೆಯಲ್ಲಿ ಜಮೀರ್ ಅಹ್ಮದ್ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗಿರುವ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿ, ಪಕ್ಷದೊಳಗಿನ ಬಂಡಾಯ ಚಟುವಟಿಕೆಗಳ ಕುರಿತು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. “ನಿನ್ನ ವಿರುದ್ಧ ಹೈಕಮಾಂಡ್ಗೆ ದೂರುಗಳು ಬರುತ್ತಿವೆ. ಈ ಕುರಿತು ನೀನೇ ಸ್ಪಷ್ಟನೆ ನೀಡಬೇಕು” ಎಂದು ಸಿಎಂ ಸೂಚನೆ ನೀಡಿದರೆಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ತಾವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇ ಹೊರತು ಬಂಡಾಯಕ್ಕೆ ಪ್ರಚೋದನೆ ನೀಡಿಲ್ಲ ಎಂದು ಹೇಳಿದ್ದಾರೆ. ದಾವಣಗೆರೆಗೆ ತೆರಳಿ ಪಕ್ಷ ಪರವಾಗಿ ಕಾರ್ಯನಿರ್ವಹಿಸಿದ್ದಾಗಿ ಹಾಗೂ ಮುಖಂಡರಿಗೆ ಸಹ ಸೂಚನೆ ನೀಡಿದ್ದಾಗಿ ವಿವರಿಸಿದರು.ಇದೇ ವೇಳೆ, ತಮ್ಮಗೆ ತಕ್ಕ ಜವಾಬ್ದಾರಿ ನೀಡಲಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವು ನಾಯಕರಿಗೆ ಅವಕಾಶ ನೀಡಿದ ಸಂದರ್ಭದಲ್ಲೇ ತಾವು ಚುನಾವಣಾ ಕಾರ್ಯ ಹಾಗೂ ಅನಾರೋಗ್ಯದ ಕಾರಣಗಳಿಂದ ಹೊರಗಿದ್ದೆ ಎಂದು ತಿಳಿಸಿದರು.

ಜಮೀರ್ ನೀಡಿದ ಸ್ಪಷ್ಟೀಕರಣವನ್ನು ಆಲಿಸಿದ ಸಿಎಂ, ಈ ವಿಚಾರವನ್ನು ಹೈಕಮಾಂಡ್ ಮಟ್ಟದಲ್ಲಿ ಸ್ವತಃ ತೆರಳಿ ಸ್ಪಷ್ಟಪಡಿಸಬೇಕೆಂದು ಸೂಚಿಸಿದರು. ಸಭೆ ಬಳಿಕ ಇಬ್ಬರೂ ಒಟ್ಟಿಗೆ ವಿಧಾನಸೌಧಕ್ಕೆ ತೆರಳಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.













