ಶಿವಮೊಗ್ಗ: ಸಾಗರ ತಾಲೂಕಿನ ಸಿಗಂಧೂರು ಸೇತುವೆ ಈಗ ಉದ್ಘಾಟನೆಗೆ ರೆಡಿಯಾಗಿದೆ. ಈ ಸೇತುವೆಯನ್ನ ಉದ್ಘಾಟನೆ ಮಾಡಲು ದಿನಾಂಕ ನಿಗದಿಯಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಸೇತುವೆಯನ್ನ ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೇನೆ ಆಹ್ವಾನ ನೀಡದೆ ಇರುವುದು ಮಧು ಬಂಗಾರಪ್ಪ ಅವರ ಕೋಪಕ್ಕೆ ಕಾರಣವಾಗಿದೆ. ಇಂದು ಆ ಬಗ್ಗೆ ಮಾತನಾಡಿರುವ ಮಧು ಬಂಗಾರಪ್ಪ ಅವರು, ಇಲ್ಲಿ ಜನರನ್ನ ದಾರಿ ತಪ್ಸುಪಿಸುವವರು ಇದ್ದಾರೆ. ಈ ವಿಚಾರವಾಗಿ ಗಡ್ಕರಿ ಅವರೇ ಸಿಎಂ ಬಳಿ ಮಾತನಾಡಿದ್ದಾರೆ. ಇಲ್ಲ ಇದು ಸರಿಯಲ್ಲ, ಕ್ಷಮೆ ಇರಲಿ ಎಂದು ಕೇಳಿದ್ದಾರೆ ಎಂದಿದ್ದಾರೆ.
ಇದೇ ವೇಳೆ ನಿಮ್ಮನ್ನ ಉದ್ಘಾಟನೆಗೆ ಕರೆದಿಲ್ವಾ ಎಂದಾಗ, ಮುಖ್ಯಮಂತ್ರಿಯನ್ನೇ ಕರೆದಿಲ್ಲ. ಇಲ್ಲಿ ನಾನ್ ಮುಖ್ಯನಾ..? ಸಿಎಂ ಮುಖ್ಯನಾ..? ಅಥವಾ ಇಲ್ಲಿನ ಎಂಪಿ ಪ್ರಚಾರ ಮುಖ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ. ಕೇಂದ್ರದಿಂದ ಸೇತುವೆ ನಿರ್ಮಾಣಕ್ಕೆ ಅನುದಾನ ಬಂದಿದೆಯಲ್ಲ ಅದಕ್ಕೆ ರಾಜ್ಯದ ಮುಖ್ಯಮಂತ್ರಿ ಅವರನ್ನ ಯಾಕೆ ಆಹ್ವಾನಿಸಬೇಕು ಎಂದುಕೊಂಡಿರಬೇಕು. ರಾಜ್ಯದ ಮುಖ್ಯಮಂತ್ರಿಯನ್ನೇ ಆಹ್ವಾನಿಸದವರು ಜಿಲ್ಲಾ ಉಸ್ತುವಾರಿ ಸಚಿವರನ್ನ ಆಹ್ವಾನ ಮಾಡುತ್ತಾರೆಯೇ ಎಂದು ಪರೋಕ್ಷವಾಗಿ ಸಂಸದ ಬಿವೈ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಟ್ಯಾಕ್ಸ್ ವಿಚಾರದಲ್ಲಿ ರಾಜ್ಯಕ್ಕೆ ಎಷ್ಟು ಕೊಟ್ಟಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಜುಲೈ 14 ಕ್ಕೆ ಸಿಗಂಧೂರು ಸೇತುವೆ ಉದ್ಘಾಟನೆಯಾಗಲಿದ್ದು, ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹೋಗ್ತಾರಾ ನೋಡಬೇಕಿದೆ.















